ಧಾರವಾಡದಲ್ಲಿ ಬಿಜೆಪಿ ಉಪವಾಸ: ಕಾಂಗ್ರೆಸ್'ಗೆ ಜನ ಕಲ್ಯಾಣಕ್ಕಿಂತ ರಾಜಕೀಯವೇ ಮುಖ್ಯ- ಅಮಿತ್ ಶಾ

ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿ ವಿರೋಧಿಸಿ ಒಂದೆಡೆ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧರಣಿ ಆರಂಭಿಸಿದ್ದರೆ, ಮತ್ತೊಂದೆಡೆ ಧಾರವಾಡದಲ್ಲಿಯೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯ ಬಿಜೆಪಿ ನಾಯಕರು ಧರಣಿ ಕುಳಿತಿದ್ದಾರೆ...
ಧಾರವಾಡದಲ್ಲಿ ಧರಣಿ ಕುಳಿತ ಬಿಜೆಪಿ
ಧಾರವಾಡದಲ್ಲಿ ಧರಣಿ ಕುಳಿತ ಬಿಜೆಪಿ
ಧಾರವಾಡ: ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿ ವಿರೋಧಿಸಿ ಒಂದೆಡೆ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧರಣಿ ಆರಂಭಿಸಿದ್ದರೆ, ಮತ್ತೊಂದೆಡೆ ಧಾರವಾಡದಲ್ಲಿಯೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯ ಬಿಜೆಪಿ ನಾಯಕರು ಧರಣಿ ಕುಳಿತಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿರುವ ಅಮತ್ ಶಾ ಅವರು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 
ಸಂಸತ್ತಿನ ಬಜೆಟ್ ಅಧಿವೇಶನದ ವೇಳೆ ತೀವ್ರ ಗದ್ದಲವನ್ನುಂಟು ಮಾಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಅಮಿತ್ ಶಾ ಅವರು ತೀವ್ರ ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಜನರ ಕಲ್ಯಾಣಕ್ಕಿಂತಲೂ, ರಾಜಕೀಯವೇ ಮುಖ್ಯ ಎಂಬುದನ್ನು ಸಾಬೀತು ಮಾಡಿದ್ದಾರೆಂದು ಹೇಳಿದ್ದಾರೆ. 
ತಮ್ಮ ಪ್ರತಿನಿಧಿಯಾಗಿ ಜನರು ಸಂಸತ್ತಿಗೆ ಆರಿಸಿ ಕಳುಹಿಸಿದ ವ್ಯಕ್ತಿ, ತಮ್ಮ ಹಿತಾಸಕ್ತಿಗೆ ಬದಲಾಗಿ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹೇಗೆ ಸಮಸ್ಯೆಗಳನ್ನು ನೀಡುತ್ತಿದ್ದಾರೆಂಬುದನ್ನು ಜನರು ತಿಳಿದುಕೊಳ್ಳಬೇಕು. ಜನರ ಕಲ್ಯಾಣಕ್ಕಾಗಿ ಸರ್ಕಾರ ರಚನೆ ಮಾಡಿದ್ದ ಬಜೆಟ್ ನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಮುಂದಾಗಿತ್ತು. ಆದರೆ, ವಿರೋಧ ಪಕ್ಷಗಳು ಪ್ರಮುಖವಾಗಿ ಕಾಂಗ್ರೆಸ್ ಪಕ್ಷಕ್ಕೆ ಅದು ಬೇಕಾಗಿಲ್ಲ. ಹೀಗಾಗಿ ಅದು ಈ ರೀತಿ ವರ್ತಿಸುತ್ತಿದೆ ಎಂದು ತಿಳಿಸಿದ್ದಾರೆ. 
ಬೇಜಾವಾಬ್ದಾರಿಯುತ ವಿರೋಧ ಪಕ್ಷಗಳು ಜನರ ರೂ.333 ಕೋಟಿ ಹಣವನ್ನು ನಷ್ಟ ಮಾಡಿದೆ. ಹೀಗಾಗಿ ಆಡಳಿತಾರೂಢ ಎನ್'ಡಿಎ ಪಕ್ಷದ ಸಂಸದರು ತಮ್ಮ ವೇತನವನ್ನು ಪಡೆಯದಿರಲು ನಿರ್ಧರಿಸಿದ್ದರು. 
ಈ ಹಿಂದೆ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಅಧಿವೇಶ ನಡೆಯುತ್ತಿದ್ದ ಸಂದರ್ಭಗಳಲ್ಲಿ ಪ್ರತಿ ಗಂಟೆಗೆ ರೂ.1.57 ಕೋಟಿ ಹಾಗೂ ರೂ.1.10 ಕೋಟಿ ಖರ್ಚು ಮಾಡಲಾಗುತ್ತಿತ್ತು. ಇದೀಗ ಸಂಸತ್ತಿನ ಎರಡೂ ಸದನಗಳಲ್ಲೂ ರೂ.200 ಕೋಟಿ ಹಾಗೂ ರೂ.133 ಕೋಟಿ ಖರ್ಚು ಮಾಡಲಾಗುತ್ತಿದೆ. 
ಬಜೆಟ್ ಅಧಿವೇಶನದ ವೇಳೆ ಕಾಂಗ್ರೆಸ್ ಸೃಷ್ಟಿಸಿದ್ದ ವಾತಾವರಣ ಕಲಾಪಕ್ಕೆ ತೀವ್ರ ಅಡ್ಡಿಯುಂಟು ಮಾಡಿತ್ತು. ಪ್ರಜಾಪ್ರಭುತ್ವದಲ್ಲಿರುವ ಜನತೆ ಅವರನ್ನು ಕ್ಷಮಿಸುವುದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಡವರಕಲ್ಯಾಣ ಹಾಗೂ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ನಡೆಸಿದ ಪ್ರಯತ್ನಗಳನ್ನು ನಾಶಪಡಿಸುವ ಉದ್ದೇಶದಿಂದ ವಿರೋಧ ಪಕ್ಷಗಳು ಈ ರೀತಿ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. 
ದೇಶದ ಪ್ರಗತಿ ಕುರಿತ ನೀತಿಗಳನ್ನು ಚರ್ಚಿಸುವ ಸಲುವಾಗಿ ಸಂಸತ್ತಿನಲ್ಲಿ ಅಧಿವೇಶವನ್ನು ನಡೆಸಲಾಗುತ್ತಿತ್ತು. ವಿರೋಧ ಪಕ್ಷಗಳು ಇದಕ್ಕೆ ಆಸಕ್ತಿ ತೋರಿಸುವ ಬದಲಿಗೆ ಇಡೀ ಕಲಾಪವನ್ನೇ ನಾಶಪಡಿಸಿತು. ಜನರ ಕಲ್ಯಾಣಕ್ಕಿಂತಲೂ ಕಾಂಗ್ರೆಸ್'ಗೆ ರಾಜಕೀಯವೇ ದೊಡ್ಡದು ಎಂಬುದು ಇದರಿಂದ ಸಾಬೀತಾಗುತ್ತದೆ ಎಂದಿದ್ದಾರೆ. 
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಕಾವೇರಿ ವಿವಾದ, ಬ್ಯಾಂಕ್ ಹಗರಣ, ಅವಿಶ್ವಾಸ ನಿರ್ಣಯ ಮಂಡನೆ ಕುರಿತ ಎಲ್ಲಾ ವಿಷಯಗಳನ್ನೂ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದರು. ಆದರೆ, ಚರ್ಚೆಗೆ ಕಾಂಗ್ರೆಸ್ ಸಿದ್ಧವಿರಲಿಲ್ಲ. ರಾಜ್ಯಸಭೆ ಹಾಗೂ ಲೋಕಸಭೆಯ ಸಭಾಪತಿಗಳು ಪದೇ ಪದೇ ಮನವಿ ಮಾಡಿಕೊಂಡಲೂ ಅದಾವುದಕ್ಕೂ ಅವರು ಕಿವಿಕೊಡಲಿಲ್ಲ. ಪ್ರತೀ ಬಾರಿ ಸಂಸದರು ಸದನದ ಬಾವಿಗಿಳಿದು ಪ್ರತಿಭಟಿಸುತ್ತಿದ್ದರು. ಜನರ ಕಲ್ಯಾಣದ ಬಗ್ಗೆ ಕಾಂಗ್ರೆಸ್'ಗೆ ಹಿತಾಸಕ್ತಿಗಳಿಲ್ಲ. ಗದ್ದಲ, ರಾಜಕೀಯವೇ ಅವರಿಗೆ ಮುಖ್ಯ.
ಮೋದಿಯವರು ಮೊದಲ ಬಾರಿಯ ಭಾಷಣದಲ್ಲಿ ಬಡವರು, ಹಿಂದುಳಿದವರು, ಮಹಿಳೆಯರು ಮತ್ತು ಯುವಕರಿಗಾಗಿ ಸರ್ಕಾರವಿದೆ ಎಂದು ಹೇಳಿದ್ದರು. ಜನರ ಕಲ್ಯಾಣಕ್ಕೆ ಬಿಜೆಪಿ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com