ಎಂ.ಆರ್.ಪಾಟೀಲ್ ಗೆ ಟಿಕೆಟ್ ನೀಡುವಂತೆ ಕೋರಿ ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳು

ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂ.ಆರ್.ಪಾಟೀಲ್ ಬೆಂಬಲಿಗರು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂ.ಆರ್.ಪಾಟೀಲ್ ಬೆಂಬಲಿಗರು ಇಂದು ಕೂಡ ಸತತ ಎರಡನೇ ದಿನ ಪ್ರತಿಭಟನೆ ನಡೆಸಿ ಪಾಟೀಲ್ ಗೆ ಬಿ ಫಾರಂ ನೀಡಬೇಕೆಂದು ಒತ್ತಾಯಿಸಿದರು.

ಪಾಟೀಲ್ ಅವರ ತಾಯಿ ಶಾರದಾ ಬಾಯಿ, ಅವರ ಪತ್ನಿ ಶಶಿಕಲಾ ಮತ್ತು ಬೆಂಬಲಿಗರು ನಿನ್ನೆ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಇಂದು ಸಂಸದ ಪ್ರಹ್ಲಾದ್ ಜೋಷಿ ಅವರ ನಿವಾಸ ಮಯೂರಿ ಎಸ್ಟೇಟ್ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ.

ಪಾಟೀಲ್ ಬೆಂಬಲಿಗರು ರಕ್ತದಲ್ಲಿ ಪತ್ರ ಬರೆದು ಪಕ್ಷದ ಹೈಕಮಾಂಡ್ ಗೆ ಉಲ್ಲೇಖಿಸಿ ಕಳುಹಿಸಿದ್ದಾರೆ. ಪಾಟೀಲ್ ಅವರು ಗೆಲ್ಲುವ ಅಭ್ಯರ್ಥಿ. ಕುಂದಗೋಳದ ಟಿಕೆಟ್ ನ್ನು ಅವರಿಗೆ ನೀಡಬೇಕು. ಅವರಿಗೆ ಮತದಾರರ ಬೆಂಬಲವಿದೆ. ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಾಟೀಲ್ ಬೆಂಬಲದಿಂದ ಬಿಜೆಪಿ ಗೆದ್ದಿದೆ ಎಂದು ಅವರ ಒಬ್ಬ ಅಭಿಮಾನಿ ಹೇಳಿದ್ದಾರೆ.
ಪಾಟೀಲ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ನಿನ್ನೆ ಪಾಟೀಲ್ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆಯೂ ನಡೆಯಿತು.

ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಾಗಿದ್ದು ಮಾಜಿ ಶಾಸಕ ಎಸ್,ಚಿಕ್ಕಣ್ಣಗೌಡರ್ ಅವರಿಗೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಇದನ್ನರಿತ ಪಾಟೀಲ್ ಬೆಂಬಲಿಗರು ಬಿಜೆಪಿ ನಾಯಕರ ಮನೆಯ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com