ಬೆಂಗಳೂರು : ಇದೇ ತಿಂಗಳ 29 ರಂದು ನಡೆಯಲಿರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ, ಪ್ರತ್ಯೇಕವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಲಿದೆ ಎಂದು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಸ್ಪಷ್ಪಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಳಮಟ್ಟದಲ್ಲಿ ಉಭಯ ಪಕ್ಷಗಳ ಮೈತ್ರಿ ಸಾಧ್ಯವಿಲ್ಲ. ಆದರೆ. ಇದು ಮುಂಬರುವ ಲೋಕಸಭಾ ಚುನಾವಣೆ ಹಾಗೂ ರಾಜ್ಯಮಟ್ಟದ ಮೈತ್ರಿ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲ್ಲ ಎಂದು ಹೇಳಿದರು.
105 ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ದೇವೇಗೌಡರು ಹೇಳಿದ್ದು, ಉಭಯ ಪಕ್ಷಗಳ ಜಿಲ್ಲಾಮಟ್ಟದ ಕಾರ್ಯಕರ್ತರಲ್ಲಿ ಆಸಕ್ತಿ ಹೆಚ್ಚಿಸಿದೆ.
ಕಾಂಗ್ರೆಸ್ ನಾಯಕರು ಸಹ ಇದೇ ಮನೋಭಾವ ಹೊಂದಿದ್ದು, ಯಾವುದೇ ಘರ್ಷಣೆ ಇಲ್ಲದಂತೆ ಪ್ರತ್ಯೇಕವಾಗಿ ಹೋರಾಟ ನಡೆಸಲಾಗುವುದು ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆಗೆ ಚರ್ಚೆ ನಡೆಸಿರುವುದಾಗಿ ದೇವೇಗೌಡ ಹೇಳಿದರು.
ದಕ್ಷಿಣ ಕರ್ನಾಟಕದ 8 ಜಿಲ್ಲೆಗಳು, ಕರಾವಳಿ ಭಾಗದ 3, ಉತ್ತರ ಕರ್ನಾಟಕ ಭಾಗದ 11 ಜಿಲ್ಲೆಗಳ 105 ನಗರಸಭೆಗಳ 2, 574 ವಾರ್ಡ್ ಗಳಿಗೆ ಆಗಸ್ಟ್ 29 ರಂದು ಚುನಾವಣೆ ನಡೆಯಲಿದೆ.
Advertisement