ಭಿನ್ನಮತಗಳ ನಡುವೆಯೂ ಅಧಿವೇಶನ ದಿನದಂದೇ ವಿದೇಶಕ್ಕೆ ಸಿದ್ದರಾಮಯ್ಯ: ಸಂಕಷ್ಟ ಸ್ಥಿತಿಯಲ್ಲಿ ಕಾಂಗ್ರೆಸ್

ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಈ ನಡುವಲ್ಲೇ ಚಳಿಗಾಲ ಅಧಿವೇಶನದ ದಿನದಂದೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿದೇಶಕ್ಕೆ ತೆರಳುತ್ತಿರುವುದು ಕಾಂಗ್ರೆಸ್'ಗೆ ಭಾರೀ...
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಈ ನಡುವಲ್ಲೇ ಚಳಿಗಾಲ ಅಧಿವೇಶನದ ದಿನದಂದೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿದೇಶಕ್ಕೆ ತೆರಳುತ್ತಿರುವುದು ಕಾಂಗ್ರೆಸ್'ಗೆ ಭಾರೀ ಸಂಕಷ್ಟ ಎದುರಾಗುವಂತೆ ಮಾಡಿದೆ. 
ಇಂದಿನಿಂದ ಬೆಳಗಾವಿ ಅಧಿವಶನ ಆರಂಭವಾಗಲಿದ್ದು, ಬೆಳಗಾವಿ ಭಾಗದ ಪ್ರಮುಖ ಸಮಸ್ಯೆಯಾಗಿರುವ ಕಬ್ಬು ಬೆಳೆಗಾರರ ಸಮಸ್ಯೆ ಮತ್ತು ಸಾಲ ಮನ್ನಾ ವಿಷಯಗಳ ಬಗ್ಗೆ ವಿರೋಧ ಪಕ್ಷಗಳು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯೆಗಳಿವೆ. ಅದರೆ, ಇದೇ ಸಂದರ್ಭದಲ್ಲಿಯೇ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯನವರ ಅನುಪಸ್ಥಿತಿ ಇರಲಿದೆ.
ಕುಟುಂಬ ಸ್ನೇಹಿತರೊಬ್ಬ ವಿವಾಹ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರು ಮಲೇಷಿಯಾಗೆ ತೆರಳುತ್ತಿದ್ದಾರೆ. ಶುಕ್ರವಾರ ಮರಳಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಇದರಿಂದಾಗಿ ಅಧಿವೇಶನಕ್ಕೆ ಗೈರು ಹಾಜರಾಗಲಿದ್ದಾರೆಂದು ಹೇಳಲಾಗುತ್ತಿದೆ. 
ಸಿದ್ದರಾಮಯ್ಯ ಅವರು ವಿದೇಶಕ್ಕೆ ತೆರಳುತ್ತಿರುವ ಹಿನ್ನಲೆಯಲ್ಲಿ ಡಿ.8ರಂದು ನಡೆಯಬೇಕಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಡಿ.18ಕ್ಕೆ ಬೆಳಗಾವಿಯ ಸುವರ್ಣಸೌಧದಲ್ಲಿ ಆಯೋಜಿಸಲಾಗಿದೆ. 
ಕಾಂಗ್ರೆಸ್ ಶಾಸಕಾಂಗ ಸಭೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಆಹ್ವಾನಿಸಿದ್ದು, ಸಭೆಯಲ್ಲಿ ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನಗಳು ನಡೆಯಲಿವೆ. 
ಅಧಿವೇಶನ ಆರಂಭಕ್ಕೂ ಮುನ್ನವೇ ಅತೃಪ್ತ ನಾಯಕರ ಮನವೊಲಿಸುವ ಸಲುವಾಗಿಯೇ ಡಿ.8ಕ್ಕೆ ಶಾಸಕಾಂಗ ಸಭೆ ನಡೆಸಲು ನಾಯಕರು ತೀರ್ಮಾನಿಸಿದ್ದರು. ಆದರೆ, ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಅವರು ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ. ಹೀಗಾಗಿ ಅತೃಪ್ತ ಶಾಸಕರ ನಡುವೆಯೂ ಅಧಿವೇಶನ ಎದುರಿಸುವುದು ಕಾಂಗ್ರೆಸ್'ಗೆ ದೊಡ್ಡ ತಲೆನೋವಾಗಿದೆ. 
ಈ ನಡುವೆ ಅತೃಪ್ತ ಕಾಂಗ್ರೆಸ್ ಶಾಸಕರು ಅಧಿವೇಶಕ್ಕೆ ಗೈರು ಹಾಜರಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಅಧಿವೇಶನದಲ್ಲಿ ವಿರೋಧ ಪಕ್ಷವನ್ನು ಎದುರಿಸಲು ನಮ್ಮ ಪಕ್ಷದಲ್ಲಿ ಸಮರ್ಥ ನಾಯಕರಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕ ದಿನೇಶ್ ಗುಂಡೂರಾವ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com