ಕರ್ನಾಟಕ ವಿಧಾನಸಭೆ ಮೇಲೆ ಕಣ್ಣು; ಬಿಜೆಪಿಗೆ ಮಿಷನ್ 150 ಟಾರ್ಗೆಟ್ ನೀಡಿದ ಅಮಿತ್ ಶಾ

ರಾಜ್ಯದಲ್ಲಿ ನೆಲಕಚ್ಚಿರುವ ಬಿಜೆಪಿಯನ್ನು ಮೇಲೆತ್ತಲು ಖುದ್ದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೇ ಪಣತೊಟ್ಟಿದ್ದು, ಗುಜರಾತ್ ಬಳಿಕ ಕರ್ನಾಟಕದಲ್ಲಿ ವಿಜಯಪತಾಕೆ ಹಾರಿಸಲು ತಂತ್ರ ರೂಪಿಸುತ್ತಿದ್ದಾರೆ...
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
Updated on
ನವದೆಹಲಿ: ರಾಜ್ಯದಲ್ಲಿ ನೆಲಕಚ್ಚಿರುವ ಬಿಜೆಪಿಯನ್ನು ಮೇಲೆತ್ತಲು ಖುದ್ದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೇ ಪಣತೊಟ್ಟಿದ್ದು, ಗುಜರಾತ್ ಬಳಿಕ ಕರ್ನಾಟಕದಲ್ಲಿ ವಿಜಯಪತಾಕೆ ಹಾರಿಸಲು ತಂತ್ರ ರೂಪಿಸುತ್ತಿದ್ದಾರೆ. 
ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಚುನಾವಣೆಯಲ್ಲಿ ಅಮಿತ್ ಶಾ ಅವರು ಪ್ರಮುಖ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಚುನಾವಣೆ ಹಿನ್ನಲೆಯಲ್ಲಿ ಸಾಕಷ್ಟು ಸಿದ್ಧತೆಗಳನ್ನು ನಡೆಸುತ್ತಿರುವ ಶಾ ಅವರು ಕೆಲ ದಿನಗಳ ಹಿಂದಷ್ಟೇ ನಗರಕ್ಕೆ ಆಗಮಿಸಿ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಿದ್ದರು. ಈ ವೇಳೆ ವಿಧಾನಸಭಾ ಚುನಾವಣೆಯು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದಲ್ಲೇ ಚುನಾವಣೆ ನಡೆಯಲಿದೆ ಎಂದು ಪಕ್ಷದ ನಾಯಕರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದರು. 
ಮಿಷನ್ 150 ಗುರಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಯಲಿದೆ. ಗುಜರಾತ್ ರಾಜ್ಯದಲ್ಲೂ ಇದೇ ರೀತಿಯ ಗುರಿಯನ್ನು ಬಿಜೆಪಿ ಇಟ್ಟುಕೊಂಡಿತ್ತು. ಆದರೆ, ಕರ್ನಾಟಕಕ್ಕೂ, ಗುಜರಾತ್ ರಾಜ್ಯಕ್ಕೂ ಸಾಕಷ್ಟು ಭಿನ್ನತೆಗಳಿವೆ. 182 ವಿಧಾನಸಭಾ ಕ್ಷೇತ್ರಗಳ ಪೈಕಿ 150 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ಗುರಿಯನ್ನು ಬಿಜೆಪಿ ಹೊಂದಿದೆ. ಅತೀಯಾದ ಆತ್ಮವಿಶ್ವಾಸವನ್ನು ಇಟ್ಟುಕೊಳ್ಳದೆ ವಾಸ್ತವಿಕವಾಗಿ ಚಿಂತನೆಗಳನ್ನು ನಡೆಸುತ್ತಿದ್ದೇವೆಂದು ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. 
ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಅಮಿತ್ ಶಾ ಅವರು ತಮ್ಮ ನಿವಾಸದಲ್ಲಿಯೇ ಈ ಹಿಂದೆ ಕರ್ನಾಟಕ ಬಿಜೆಪಿ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆಯನ್ನು ನಡೆಸಿದ್ದರು. ಯಡಿಯೂರಪ್ಪ ಅವರೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಲೋಕಸಭಾ ಸಂಸದರಾಗಿದ್ದಾರೆ. ಆದರೂ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಯುವ ಮೂಲಕ ಪಕ್ಷ ತಮ್ಮ ನಾಯಕತ್ವದ ಅಡಿಯಲ್ಲೇ ಸಾಗುತ್ತದೆ ಎಂಬುದನ್ನು ಸಭೆಯಲ್ಲಿ ಸ್ಪಷ್ಟಪಡಿಸಿದ್ದರು ಎಂದು ತಿಳಿದುಬಂದಿದೆ. 
ಚುನಾವಣಾ ಜವಾಬ್ದಾರಿಗಳನ್ನು ರಾಜ್ಯ ಹಾಗೂ ಕೇಂದ್ರದಲ್ಲಿರುವ ಹಿರಿಯ ನಾಯಕರಿಗೆ ಹಂಚಲಾಗುತ್ತಿದ್ದು, ಜಾತಿ ಮುಖಂಡರು ತಮಗೆ ಬೆಂಬಲವಿರುವ ಪ್ರದೇಶಗಳನ್ನು ಏಕೀಕರಿಸಬೇಕಿದ್ದು, ಕಾಂಗ್ರೆಸ್ ವಿರುದ್ಧ ತೀವ್ರ ಸ್ಪರ್ಧೆ ನಡೆಸಬೇಕಿದೆ. ಕಾನೂನು ಮತ್ತು ಸುವ್ಯವಸ್ಥ ವಿಚಾರ, ಅಭಿವೃದ್ಧಿ ಕೊರತೆ, ಭ್ರಷ್ಟಾಚಾರ ವಿಚಾರಗಳನ್ನು ಗುರಿಯಾಗಿರಿಸಿಕೊಂಡು ಕಾಂಗ್ರೆಸ್ ವಿರುದ್ಧ ದನಿಯೆತ್ತುವಂತೆ ನಾಯಕರಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. 
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚುನಾವಣೆಯನ್ನು ಮುನ್ನಡೆಸಲಿದ್ದು, ಚುನಾವಣೆಯ ಅಂತಿಮ ಪ್ರಚಾರದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸುತ್ತಾರೆಂದು ಬಿಜೆಪಿ ಪಕ್ಷದ ಮೂಲಗಳು ಮಾಹಿತಿ ನೀಡಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com