ಬೆಂಗಳೂರು: ವಿಧಾನಸಭೆ ಕಲಾಪಕ್ಕೆ ಗೈರು ಆದ ಸಚಿವರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಸಚಿವರ ಗೈರು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇಂದು ಮೂರನೇ ದಿನದ ಅಧಿವೇಶನ ಆರಂಭವಾಗುತ್ತಿದ್ದಂತೆ, ಅಧಿಕಾರಿಗಳು ನೀಡಿರುವ ಪಟ್ಟಿಯ ಪ್ರಕಾರ 13 ಸಚಿವರು ಹಾಜರಿರಬೇಕು. ಆದರೆ ಕೇವಲ ಆರು ಮಂದಿ ಮಾತ್ರ ಇದ್ದಾರೆ ಇನ್ನೂ ಏಳು ಮಂದಿ ಸಚಿವರು ಸದನಕ್ಕೆ ಬಂದಿಲ್ಲ. ಹೀಗಾದ್ರೆ ಹೇಗೆ? ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಅವರು, ಶೀಘ್ರದಲ್ಲೇ ಉಳಿದ ಸಚಿವರು ಸದನಕ್ಕೆ ಆಗಮಿಸಲಿದ್ದಾರೆ ಎಂದರು.
ಇನ್ನು 15 ನಿಮಿಷದಲ್ಲಿ ಸಚಿವರು ಸದನದಲ್ಲಿ ಇರಬೇಕು ಖಡಕ್ ಸೂಚನೆ ಕೊಟ್ಟ ಸ್ಪೀಕರ್ ರಮೇಶ್ ಕುಮಾರ್ ಅವರು, ಸಚಿವರು ಕಲಾಪವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಸಚಿವರಿಗೆ ಸದನದಲ್ಲಿ ಕೂರುವುದು ಬಿಟ್ಟು ಇನ್ನೇನು ಕೆಲಸ ಇದೆ. ಸದನವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇದ್ದರೆ ಸಹಿಸಿಕೊಳ್ಳುವುದಿಲ್ಲ ಎಂದರು.
ಎಚ್ ಡಿ ರೇವಣ್ಣ, ಬಂಡೆಪ್ಪ ಕಾಶೆಂಪುರ್, ಎಂಸಿ ಮನಗೋಳಿ, ಸಿಎಸ್ ಪುಟ್ಟರಾಜು, ಸಾರಾ ಮಹೇಶ್, ಡಿಕೆ ಶಿವಕುಮಾರ್ , ಪ್ರಿಯಾಂಕ್ ಖರ್ಗೆ, ಶಿವಾನಂದ ಪಾಟೀಲ್ ಇರಬೇಕು. ಇದರಲ್ಲಿ ಕೆಲವರು ಮಾತ್ರ ಇದ್ದಾರೆ. ಸಚಿವರು ಎಲ್ಲಿಯಾದರೂ ಹೋಗಬೇಕಂದ್ರೆ ನನ್ನ ಅನುಮತಿ ಪಡೆಯಬೇಕು ಎಂದ ಸ್ಪೀಕರ್ ಹೇಳಿದರು.