ತುಮಕೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರ ಸ್ವಾಮಿ ಗುರುವಾರ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು. ಈ ವೇಳೆ ಕಾಂಗ್ರೆಸ್ ಪ್ರಭಾವಿ ಸಚಿವ ಡಿ.ಕೆ ಶಿವಕುಮಾರ್ ಗೈರಾಗಿದ್ದರು. ಸದನಕ್ಕೆ ಬಾರದ ಡಿಕೆಶಿ ಪತ್ನಿ ಉಷಾ ಅವರೊಂದಿಗೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಸೋಮೆಕಟ್ಟೆ ಕಾಡಸಿದ್ದೇಶ್ವರ ಮಠದಲ್ಲಿ ಪೂಜಾ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದರು.
ಜುಲೈ 1 ರಂದು ಆರಂಭವಾದ ಈ ಧಾರ್ಮಿಕ ವಿಧಿ ವಿಧಾನದಲ್ಲಿ ಹಲವು ಹೋಮ ಹವನ ನಡೆದಿದ್ದವು, ಅಂತಿಮ ದಿನವಾದ ಗುರುವಾರ ಪೂರ್ಣಾಹುತಿ ನೀಡಬೇಕಿತ್ತು, ಇದಕ್ಕೆ ಡಿಕೆ ಶಿವಕುಮಾರ್ ಕಡ್ಡಾಯವಾಗಿ ಹಾಜರಾಗಬೇಕೆಂದು ಮಠದ ಸ್ವಾಮಿಜೀ ತಿಳಿಸಿದ್ದರು. ಹೀಗಾಗಿ ಅವರು ಭಾಗವಹಿಸಿದ್ದರು ಎಂದು ಮಠದ ದಯಾನಂದ ಸಾಗರ ತಿಳಿಸಿದ್ದಾರೆ.
ಡಿ,ಕೆ ಶಿವಕುಮಾರ್ ಮುಂದೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಸ್ವಾಮೀಜಿಗಳು ಭವಿಷ್ಯ ನುಡಿದಿದ್ದು ಅವರ ಸಲಹೆಯಂತೆ ಪೂಜೆ ನಡೆದಿದೆ. ಶಿವಕುಮಾರ್ ಅವರ ಆಪ್ತ ಜ್ಯೋತಿಷಿ ನಾಗರಾಜ್ ಶಾಸ್ತ್ರಿ ಸಲಹೆ ಮೇರೆಗೆ ಸಚಿವರು ಪೂಜಾ ಕೈಂಕರ್ಯ ನಡೆಸಿದ್ದಾರೆ.
ಇದೊಂದು ಪೂರ್ವ ನಿರ್ಧರಿತ ಕೆಲಸವಾಗಿತ್ತು. ಇದರ ಬಗ್ಗೆ ನಾನು ಮುಖ್ಯಮಂತ್ರಿ ಅವರಿಗೆ ತಿಳಿಸಿದ್ದೆ, ನಾನು ಬಜೆಟ್ ಮಂಡಿಸುವ ವೇಳೆ ಹಾಜರಿರಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ಶಿವಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಳೆದ 15 ವರ್ಷಗಳಿಂದ ಶಿವಕುಮಾರ್ ಮಠದ ಭಕ್ತಾದಿಯಾಗಿದ್ದಾರೆ. ಹಿಂದೊಮ್ಮೆ ಎಸ್ ಎಂ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. ಮಠಕ್ಕೆ ಭೇಟಿ ನೀಡಿದ ನಂತರ 2005 ರಲ್ಲಿ ಕೃಷ್ಣ ಮಹಾರಾಷ್ಟ್ರ ರಾಜ್ಯಪಾಲರಾಗಿ ನೇಮಕಗೊಂಡಿದ್ದರು.
ಮಠಕ್ಕೆ ಭೇಟಿ ನೀಡಿದ ನಂತರ ನನ್ನ ರಾಜಕೀಯ ಜೀವನದ ಭವಿಷ್ಯವೇ ಬದಲಾಯಿತು ಎಂದು ಕೃಷ್ಣ ಹೇಳಿದ್ದರು.