ಸಭಾಪತಿ ಚುನಾವಣೆ: ದೆಹಲಿಗೆ ದೋಸ್ತಿಗಳ ನಡುವಿನ ಹಗ್ಗಜಗ್ಗಾಟ?

ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮತ್ತೊಂದು ಬಿಕ್ಕಟ್ಟು ಎದುರಾಗಿದ್ದು, ಉಭ ಪಕ್ಷಗಳ ಹಗ್ಗಜಗ್ಗಾಟ ಇದೀಗ ದೆಹಲಿ ತಲುಪುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು; ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮತ್ತೊಂದು ಬಿಕ್ಕಟ್ಟು ಎದುರಾಗಿದ್ದು, ಉಭ ಪಕ್ಷಗಳ ಹಗ್ಗಜಗ್ಗಾಟ ಇದೀಗ ದೆಹಲಿ ತಲುಪುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. 
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ 35 ಸ್ಥಾನ ಹೊಂದಿದ್ದು, ಜೆಡಿಎಸ್ ಬಲ ಕೇವಲ 14 ಇದೆ. ಆದ್ದರಿಂದ ಸಭಾಪತಿ ಸ್ಥಾನವನ್ನು ಜೆಡಿಎಸ್'ಗೆ ಬಿಟ್ಟುಕೊಡಬಾರದು ಎಂಬುದು ಕಾಂಗ್ರೆಸ್ ನಾಯಕ ಒತ್ತಾಯವಾಗಿದೆ. ಆದರೆ, ವಿಧಾನಸಬೆ ಸ್ಪೀಕರ್ ಸ್ಥಾನವನ್ನು ಕಾಂಗ್ರೆಸ್'ಗೆ ಬಿಟ್ಟು ಕೊಡಲಾಗಿದ್ದು, ವಿಧಾನ ಪರಿಶತ್ ಸಭಾಪತಿ ಸ್ಥಾನ ನಮ್ಮ ಪಕ್ಷಕ್ಕೇ ಬೇಕು ಎಂದು ಜೆಡಿಎಸ್ ಪಟ್ಟು ಹಿಡಿದು ಕುಳಿತಿದೆ. 
ಈ ಮೂಲಕ ಸ್ಪೀಕರ್ ಸ್ಥಾನ ದೋಸ್ತಿ ಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಹಗ್ಗ ಜಗ್ಗಾಟಕ್ಕೆ ವೇದಿಕೆ ಒದಗಿಸಿದಂತಾಗಿದೆ. 
ಈ ಹಿಂದೆ ಸ್ಪೀಕರ್ ಸ್ಥಾನದ ಮೇಲೆ ಜೆಡಿಎಸ್ ಕಣ್ಣಿಟ್ಟು ಪ್ರಯತ್ನ ನಡೆಸಿದರೂ ಬಳಿಕ ಕೊನೆಗೆ ಕಾಂಗ್ರೆಸ್'ಗೆ ಬಿಟ್ಟುಕೊಟ್ಟಿತ್ತು. ಆದರೆ, ವಿಧಾನಪರಿಷತ್'ನಲ್ಲಿ ಪ್ರಸ್ತುತ ಹಂಗಾಮಿ ಸಭಾಪತಿ ಆಗಿ ಜೆಡಿಎಸ್ ನವರೇ ಆದ ಬಸವರಾಜ ಹೊರಟ್ಟಿ ಇದ್ದು, ಆ ಹುದ್ದೆಯನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕು ಎಂಬುದು ಜೆಡಿಎಸ್ ಚಿಂತನೆಯಾಗಿದೆ. 
ಆದರೆ, ಜೆಡಿಎಸ್'ಗೆ ಉಪಸಭಾಪತಿ ಸ್ಥಾನ ನೀಡಿ ಸಭಾಪತಿ ಹುದ್ದೆ ಪಡೆಯುವ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೂಡ ಸಭಾಪತಿ ಸ್ಥಾನ ಕಾಂಗ್ರೆಸ್'ಗೇ ಸಿಗಬೇಕು ಎಂದು ಹೇಳುತ್ತಿದ್ದಾರೆ. ಇದಷ್ಟೇ ಅಲ್ಲದೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಶನಿವಾರ ಭೇಟಿಯಾದ ಸಂದರ್ಭದಲ್ಲಿಯೂ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆಂದು ಹೇಳಲಾಗುತ್ತಿದೆ. 
ಬಜೆಟ್ ಅಧಿವೇಶ ಸೋಮವಾರದಿಂದ ಆರಂಭವಾಗಲಿದ್ದು, ಜುಲೈ 12ಕ್ಕೆ ಅಂತಿಮಗೊಳ್ಳಲಿದೆ. ಬಜೆಟ್ ಅಧಿವೇಶನ ಅಂತಿಮಗೊಳ್ಳುತ್ತಿದ್ದಂತೆಯೇ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. 
ಸಭಾಪತಿ ಸ್ಥಾನ ಕಾಂಗ್ರೆಸ್'ಗೇ ಬರಬೇಕೆಂದು ಹಲವು ಎಂಎಲ್'ಸಿಗಳು ಅಭಿಪ್ರಾಯಪಟ್ಟಿದ್ದಾರೆಂದು ಕೆಪಿಸಿಸಿ ಕಾರ್ಯಾಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆಯವರು ಹೇಳಿದ್ದಾರೆ. 
ಈ ವಿಚಾರ ಕುರಿತು ಕಾಂಗ್ರೆಸ್ ಎಂಎಲ್'ಸಿಗಳು ಈಗಾಗಲೇ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ. 
ವಿಧಾನಸಭಾ ಸ್ಪೀಕರ್ ಚುನವಣೆ ವೇಳೆಯೇ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭೆ ಸ್ಪೀಕರ್ ಸ್ಥಾನ ಬಿಟ್ಟುಕೊಟ್ಟು, ವಿಧಾನ ಪರಿಷತ್ ಸಭಾಪತಿ ಸ್ಥಾನ ಜೆಡಿಎಸ್ ಪಕ್ಷಕ್ಕೆ ಬರಬೇಕೆಂದು ಹೇಳಲಾಗಿತ್ತು. ಹಿರಿಯ ನಾಯಕರಾದ ಕೆ.ಸಿ. ವೇಣುಗೋಪಾಲ್ ಹಾಗೂ ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆದಿದ್ದಾಗ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು ಎಂದು ಜೆಡಿಎಸ್ ಎಂಎಲ್'ಸಿ ಟಿ.ಎ. ಶರವಣ ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com