ಬೆಂಗಳೂರು: ಉತ್ತರ ಕರ್ನಾಟಕದ ಹಲವು ಪ್ರಮುಖ ನಾಯಕರಿಗೆ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಭಿನ್ನಮತಕ್ಕೆ ಕಾರಣವಾಗಿದೆ, ಬಂಡಾಯ ನಿಗ್ರಹಿಸಲು ಕಾಂಗ್ರೆಸ್ ಪಕ್ಷದ ಮುಖಂಡರು ಹಲವು ರೀತಿಯ ತಂತ್ರಗಳನ್ನು ಅನುಸರಿಸಿದ್ದಾರೆ. ಇನ್ನೂ ಜೆಡಿಎಸ್ ನಲ್ಲಿ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.
ಮಾಜಿ ಸಚಿವರುಗಳಾದ ಎಂ,ಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಎಚ್.
ಕೆ ಪಾಟೀಲ್, ತನ್ವೀರ್ ಸೇಠ್, ರೋಷನ್ ಬೇಗ್, ಬಹಿರಂಗವಾಗೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಸಂಪುಟ ವಿಸ್ತರಣೆ ಮಾಡುವಾಗ ಈ ಅಸಮಾಧಾನ ಸಾಮಾನ್ಯ ಎಂದು ಸಿಎಂ ಕುಮಾರ ಸ್ವಾಮಿ ಹೇಳಿದರೇ, ಭಿನ್ನಮತವನ್ನು ಕೂಡಲೇ ಶಮನ ಮಾಡಲಾಗುವುದು ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ.
ಸಂಪುಟಕ್ಕೆ ಶಾಸಕರ ಪಟ್ಟಿ ಅಂತಿಮವಾಗುತ್ತಿದ್ದಂತೆ ಹಲವು ಕಡೆ ಶಾಸಕರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಮೈಸೂರು, ಗದಗ, ವಿಜಯಾಪುರ ಮತ್ತು ಕಲಬುರಗಿ ಗಳಲ್ಲಿ ಪ್ರತಿಭಟನೆಗಳು ನಡೆದವು. ಎಂ.ಬಿ ಪಾಟೀಲ್ ಮತ್ತು ಸತೀಶ್ ಜಾರಕಿಹೊಳಿ, ಬೆಂಬಲಿಗರು ಬೆಂಗಳೂರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು, ಪಾಟೀಲ್ ಬೆಂಬಲಿಗರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.
ಪರಿಸ್ಥಿತಿಯ ತೀವ್ರತೆ ಅರಿತ ಕೆಪಿಸಿಸಿ ಕೃಷ್ಣಬೈರೇಗೌಡ ಅವರನ್ನು ಸಂಧಾನಕ್ಕೆ ಕಳುಹಿಸಿತ್ತು. ಈ ವೇಳೆ ಪಾಟೀಲ್ ನಿವಾಸಕ್ಕೆ ಕೃಷ್ಣ ಬೈರೇಗೌಡ ತೆರಳಿದ್ದರು. ಈ ವೇಳೆ ಪಾಟೀಲ್ ಕೆರಳಿದಂತೆ ಕಾಣುತ್ತಿದ್ದರು. ಮತ್ತೆ ಸಂಜೆ ಡಿ,ಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಪಾಟೀಲ್ರ ಮನವೊಲಿಸಲು ಪ್ರಯತ್ನಿಸಿದರು.
ತಮ್ಮ ಕೆಲಸ ಏನಿದ್ದರೂ ತಮ್ಮ ಸ್ವಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದು ಶೈಕ್ಷಣಿಕ ಸಂಸ್ಧೆಗಳ ಕಡೆ ಗಮನ ಹರಿಸುವುದಾಗಿ ಪಾಟೀಲ್ ತಿಳಿಸಿದ್ದಾರೆ.
ಇನ್ನೂ ಇದೇ ವೇಳೆ ಮಾತನಾಡಿರುವ ಸತೀಶ್ ಜಾರಕಿಹೊಳಿ,ಮಂಗಳವಾರ ಸಂಜೆಯವರೆಗೂ ಸಚಿವರ ಪಟ್ಟಿಯಲ್ಲಿ ನನ್ನ ಹೆಸರಿತ್ತು,. ನಾಳೆ ನಾನು ಪಕ್ಷದ ಮುಖಂಡರೊಂದಿಗೆ ಚರ್ಚಿಸಲಿದ್ದೇನೆ ಎಂದು ಹೇಳಿದ್ದಾರೆ.
ಅಸಮಾಧಾನಗೊಂಡಿರುವ ಹಲವು ಕಾಂಗ್ರೆಸ್ ಶಾಸಕರು ಖಾಸಗಿ ಹೋಟೆಲ್ ನಲ್ಲಿ ಸಭೆ ಸೇರಿ ಮಾತುಕತೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ, ಸತೀಶ್ ಜಾರಕಿ ಹೊಳಿ, ಬಿ,ಸಿ ಪಾಟೀಲ್, ರೋಷನ್ ಬೇಗ್, ಎನ್ ಎ ಹ್ಯಾರಿಸ್ ಮಂತಾದವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.