ಯಡಿಯೂರಪ್ಪ ಜೊತೆ ಊಟ ಮಾಡಿದ ಮಾತ್ರಕ್ಕೇ ಬಿಜೆಪಿ ಸೇರೋಕೆ ಆಗುತ್ತಾ?: ಶ್ಯಾಮನೂರು ಶಿವಶಂಕರಪ್ಪ
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಜೊತೆಗೆ ಊಟ ಮಾಡಿದ ಮಾತ್ರಕ್ಕೆ ಬಿಜೆಪಿ ಸೇರೋಕೆ ಆಗುತ್ತಾ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಸೇರುವ ಊಹಾಪೋಹಗಳನ್ನು ತಳ್ಳಿ ಹಾಕಿದ್ದಾರೆ.
ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಜೊತೆಗೆ ಊಟ ಮಾಡಿದ ಮಾತ್ರಕ್ಕೆ ಬಿಜೆಪಿ ಸೇರೋಕೆ ಆಗುತ್ತಾ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಸೇರುವ ಊಹಾಪೋಹಗಳನ್ನು ತಳ್ಳಿ ಹಾಕಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ಯಾಮನೂರು ಶಿವಶಂಕರಪ್ಪ ಅವರು, ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬೇಕಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್ ಪಕ್ಷಕ್ಕೆ ಬರಲಿ ಎಂದು ಹೇಳಿದ್ದಾರೆ.
"ನಾನು ಬಿಜೆಪಿ ಸೇರುವ ವಿಚಾರ ಸುಳ್ಳು. ಕಳೆದ 50 ವರ್ಷಗಳಿಂದಲೂ ಕಾಂಗ್ರೆಸ್ ನಲ್ಲಿದ್ದೇನೆ. ಆಹ್ವಾನ ನೀಡಿದ ತಕ್ಷಣ ಬಿಜೆಪಿಗೆ ಹೋಗಲು ಸಾಧ್ಯವೇ? ಯಡಿಯೂರಪ್ಪನ ಜತೆ ಊಟ ಮಾಡಿದ ತಕ್ಷಣ ಬಿಜೆಪಿ ಸೇರುತ್ತಾರಾ? ಬೇಕಾದರೆ ಯಡಿಯೂರಪ್ಪನವರೇ ಕಾಂಗ್ರೆಸ್ಗೆ ಬರಲಿ ಎಂದು ಹೇಳಿದರು.
ಶ್ಯಾಮನೂರು ಶಿವಶಂಕರಪ್ಪ-ಯಡಿಯೂರಪ್ಪ ರಹಸ್ಯ ಮಾತುಕತೆ
ಮತ್ತೊಂದೆಡೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದ ಮೂಲಕ ವೀರಶೈವ ಸಮುದಾಯದ ಮತ ವಿಭಜನೆಯಾಗುವ ಅಪಾಯವನ್ನರಿತ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್ ಪಕ್ಷದ ಪ್ರಮುಖ ಒಕ್ಕಲಿಗ ಸಮುದಾಯದ ನಾಯಕ ಶ್ಯಾಮನೂರು ಶಿವಶಂಕರಪ್ಪ ಜತೆಗೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಸಿದ್ಧಗಂಗಾ ಮಠದಲ್ಲಿ ಈ ಇಬ್ಬರೂ ನಾಯಕರು ಭೇಟಿಯಾಗಿ ಸುಮಾರು ಒಂದು ಗಂಟೆಗಳ ಕಾಲ ರಹಸ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ತಮಗೆ ಉರುಳಾಗಬಹುದು ಎಂದು ಅರಿತ ಬಿಎಸ್ ವೈ ಅದನ್ನು ಉಪಾಯವಾಗಿಯೇ ನಿವಾರಿಸಲು ದಾರಿ ಹುಡಕುತ್ತಿದ್ದಾರೆ ಎಂಬ ಚರ್ಚೆಗಳು ಗಾಢವಾಗಿವೆ.