ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಇಟ್ಟುಕೊಂಡಿದ್ದ ಬಿಜೆಪಿಯ ಅನೇಕ ಸಂಸದರಿಗೆ ನಿರಾಸೆಯಾಗಿದೆ. ಬಿಜೆಪಿ ಚುನಾವಣಾ ಸಮಿತಿಯ ಸಂಚಾಲಕರಾಗಿ ಸಂಸದರಾದ ಪಿ.ಸಿ.ಮೋಹನ್ ಮತ್ತು ಶೋಭಾ ಕರಂದ್ಲಾಜೆ ಅವರನ್ನು ನೇಮಿಸುವ ಮೂಲಕ ಬಿಜೆಪಿ ನಾಯಕತ್ವ ಸ್ಪಷ್ಟ ಸಂದೇಶ ನೀಡಿದೆ. ಮುಂದಿನ ಎರಡು ತಿಂಗಳು ಚುನಾವಣೆ ಹಿನ್ನೆಲೆಯಲ್ಲಿ ಸಮಿತಿಯ ಸದಸ್ಯರು ತಮ್ಮ ಸಂಪೂರ್ಣ ಅವಧಿಯನ್ನು ಬಿಜೆಪಿಯ ಮಿಷನ್ 150ಕ್ಕೆ ಮೀಸಲಿಡಬೇಕೆಂದು ಸಂದೇಶ ನೀಡಿದ್ದಾರೆ.
ಸಮಿತಿ ಸದಸ್ಯರು ಉಪ ಸಮಿತಿಗಳ ಅನೇಕ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಚುನಾವಣಾ ಪ್ರಣಾಳಿಕೆ ಸಮಿತಿ ಮತ್ತು ಆರೋಪಪಟ್ಟಿ ಸಮಿತಿ ಪರಿಣಾಮಕಾರಿಯಾಗಿ ಕಾರ್ಯತಂತ್ರ ರೂಪಿಸಬೇಕೆಂದು ನಾಯಕರು ಸೂಚನೆ ನೀಡಿದ್ದಾರೆ. ಟಿಕೆಟ್ ಗೆ ಲಾಬಿ ನಡೆಸುವ ಬದಲು ಸಂಸದರು ತಮ್ಮ ಸಂಪೂರ್ಣ ಅವಧಿಯನ್ನು ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಶ್ರಮಿಸಬೇಕೆಂದು ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಶೋಭಾ ಕರಂದ್ಲಾಜೆ ಸೇರಿದಂತೆ ಪಿ.ಸಿ.ಮೋಹನ್, ಪ್ರತಾಪ್ ಸಿಂಹ, ಶ್ರೀರಾಮುಲು, ಸುರೇಶ್ ಅಂಗಡಿ, ಗಡ್ಡಿ ಗೌಡರ್ ಮತ್ತು ಜಿಎಂ ಸಿದ್ದೇಶ್ವರ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ತೀವ್ರ ಆಕಾಂಕ್ಷೆ ಹೊಂದಿದ್ದರು ಎನ್ನಲಾಗಿದೆ. ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಬಿ ಎಸ್ ಯಡಿಯೂರಪ್ಪ ಹೊರತುಪಡಿಸಿ ಬೇರೆ ಯಾವುದೇ ಸಂಸದರಿಗೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಿಲ್ಲ ಎಂದು ನಾಯಕರು ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. ಆದರೂ ಕೆಲವು ಸಂಸದರು ತಮ್ಮ ಆಶಾವಾದ ಬಿಟ್ಟಿಲ್ಲ.
Advertisement