

ನೆಲಮಂಗಲ: ವಿಧಾನಸಭೆ ಚುನಾವಣೆಗೆ ಇನ್ನು ಬೆರಳೆಣಿಕೆ ದಿನಗಳು ಬಾಕಿ ಉಳಿದಿದ್ದು ಬೆಂಗಳೂರು ಸಮೀಪ ನೆಲಮಂಗಲದ ಮತದಾರರು ಇನ್ನೂ ಕೂಡ ಯಾರಿಗೆ ಮತ ಹಾಕಬೇಕು ಎಂಬುದರ ಬಗ್ಗೆ ಖಾತ್ರಿ ಹೊಂದಿಲ್ಲ. ಅಭ್ಯರ್ಥಿಗಳು ಅಷ್ಟು ಉತ್ತಮವಾಗಿದ್ದಾರೆ ಎಂದರ್ಥವಲ್ಲ. ಎಲ್ಲಾ ಅಭ್ಯರ್ಥಿಗಳು ಕೂಡ ಪ್ರಚಾರ ಕಾರ್ಯವನ್ನು ಹೆಚ್ಚು ಸುದ್ದಿ ಮಾಡದೆ ಪ್ರದೇಶವನ್ನು ನಿರ್ಲಕ್ಷಿಸಿರುವುದು ಕಾರಣವಾಗಿದೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ನೆಲಮಂಗಲಕ್ಕೆ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಕಳೆದ ಭಾನುವಾರ ಭೇಟಿ ನೀಡಿದಾಗ ಹಲವು ಅವ್ಯವಸ್ಥೆಗಳು ಗೋಚರವಾದವು. ತೆರೆದ ಚರಂಡಿ, ಹೊಗೆ, ಧೂಳಿನ ಸಮಸ್ಯೆ, ಕೆಟ್ಟ ರಸ್ತೆಗಳು ಇಲ್ಲಿನ ಜನರ ನಿತ್ಯ ಬದುಕನ್ನು ನರಕ ಸದೃಶ ಮಾಡಿದೆ.
ಇಲ್ಲಿನ ಆಟೊ ಚಾಲಕ ತಮ್ಮನಗೌಡ ಸಿ ಎಚ್ ಮಾತನಾಡಿ, ರಾಜಕೀಯ ನಾಯಕರು ಪ್ರಚಾರಕ್ಕೆ ಬಂದರೆಂದರೆ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಹೊರಗಿನ ರಾಜಕೀಯ ಮುಖಂಡರು ಮತ್ತು ಅವರ ಬೆಂಬಲಿಗರು ಬಂದು ರ್ಯಾಲಿ ಮಾಡುವುದರಿಂದ ಈ ಸಂಚಾರ ದಟ್ಟಣೆ ಉಂಟಾಗುತ್ತದೆಯೇ ಹೊರತು ಇಲ್ಲಿನ ಅಭ್ಯರ್ಥಿಗಳ ಚುನಾವಣಾ ಪ್ರಚಾರದಿಂದಾಗಿ ಅಲ್ಲ. ಇಲ್ಲಿನ ನಾಗರಿಕರ ಸಮಸ್ಯೆ ಹಲವು ವರ್ಷಗಳಿಂದ ಪರಿಹಾರ ಕಾಣದೆ ಸಮಸ್ಯೆಯಾಗಿಯೇ ಉಳಿದುಕೊಂಡಿದೆ. ತೆರೆದ ಚರಂಡಿಯಿಂದಾಗಿ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದು ಹೇಳುತ್ತಾರೆ.
ಹೂವಿನ ವ್ಯಾಪಾರಿಯಾಗಿರುವ ಲಕ್ಷ್ಮೀದೇವಿ ಎಸ್ ಜಿ ಮತ್ತು ಅವರ ಮೊಮ್ಮಗ ನಟರಾಜು ಜಿ,ವಿ ಅವರಿಗೆ ಸೊಳ್ಳೆ ಸಮಸ್ಯೆ ದೊಡ್ಡ ತಲೆನೋವಾಗಿದೆ. ರಾಜಕೀಯ ನಾಯಕರು ಸರಿಯಾದ ಚರಂಡಿ ವ್ಯವಸ್ಥೆ ಮಾಡುವುದಿಲ್ಲವೇಕೆ? ಸೊಳ್ಳೆಗಳ ಕಡಿತದಿಂದ ಜನರು ಡೆಂಗ್ಯು ಮತ್ತು ಇತರ ರೋಗಗಳಿಗೆ ತುತ್ತಾಗುತ್ತಾರೆ. ನಾವಿಲ್ಲಿ ಕೀಟಗಳ ರೀತಿಯಲ್ಲಿ ವಾಸಿಸುತ್ತಿದ್ದೇವೆ. ಮಾನವ ವಾಸಕ್ಕೆ ಇಲ್ಲಿ ಯೋಗ್ಯವಾಗಿಲ್ಲ ಎನ್ನುತ್ತಾರೆ.
ಚುನಾವಣಾ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಬೇಸತ್ತು ಹೋಗಿರುವ ಜನರು ಮತ ಚಲಾಯಿಸದಿರಲು ನಿರ್ಧರಿಸಿದ್ದಾರೆ. ಸಿವಿಲ್ ಕಾಂಟ್ರಾಕ್ಟರ್ ಸತೀಶ್ ಕುಮಾರ್ ಜಿ.ಬಿ, ಕಳೆದ 5 ವರ್ಷಗಳಲ್ಲಿ ಇಲ್ಲಿನ ಶಾಸಕರಾಗಲಿ, ಪಟ್ಟಣ ಪಂಚಾಯತಿಯ ಕಾರ್ಪೊರೇಟರ್ ಗಳಾಗಲಿ ಅಭಿವೃದ್ಧಿ ಕೆಲಸಗಳನ್ನು ಏನೂ ಕೈಗೊಂಡಿಲ್ಲ. ಸ್ಥಳೀಯರು ಮತ ಚಲಾಯಿಸಲು ಆಸಕ್ತಿ ಹೊಂದಿಲ್ಲ. ಆರ್.ನಾರಾಯಣಸ್ವಾಮಿಯವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಆದರೆ ಅವರ್ಯಾರು, ಅವರ ಹಿನ್ನೆಲೆಯೇನೆಂದು ಜನರಿಗೆ ಗೊತ್ತಿಲ್ಲ.
ರಸ್ತೆ ಬದಿ ವ್ಯಾಪಾರಿ ಭಾರತಿ ಬಸವನಹಳ್ಳಿ ಇಲ್ಲಿನ ಸಮಸ್ಯೆ ಬಗ್ಗೆ ಮಾತನಾಡುತ್ತಾ, ನೆಲಮಂಗಲ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕವಿಲ್ಲ. 2 ಕಿಲೋ ಮೀಟರ್ ಗಿಂತ ಹೆಚ್ಚು ದೂರವಿದ್ದು ಕೆಲವೊಮ್ಮೆ ಹೆಚ್ಚು ಹಣ ನೀಡದಿದ್ದರೆ ಆಟೋದವರು ಕರೆದುಕೊಂಡು ಹೋಗಲು ನಿರಾಕರಿಸುತ್ತಾರೆ. ಕೆಲವು ಪ್ಯಾಸೆಂಜರ್ ರೈಲು ಇದ್ದರೂ ಕೂಡ ಜನರು ಸುತ್ತಮುತ್ತಲ ಜಿಲ್ಲೆಗಳಿಗೆ ಹೋಗಲು ಪರದಾಡುತ್ತಾರೆ ಎಂದರು.