ರಂಜಿತ್ ಪುರ ಗ್ರಾಮದಲ್ಲಿ ಗಣಿಯನ್ನು ಟ್ರಕ್ ನಲ್ಲಿ ಕಾರ್ಖಾನೆಗೆ ಕೊಂಡೊಯ್ಯುತ್ತಿರುವುದು
ರಂಜಿತ್ ಪುರ ಗ್ರಾಮದಲ್ಲಿ ಗಣಿಯನ್ನು ಟ್ರಕ್ ನಲ್ಲಿ ಕಾರ್ಖಾನೆಗೆ ಕೊಂಡೊಯ್ಯುತ್ತಿರುವುದು

ಗಣಿ ಧೂಳಿನಿಂದ ಮುಳುಗಿಹೋಗಿರುವ ಬಳ್ಳಾರಿಯ ಗ್ರಾಮಗಳು: ಕೇಳೋರಿಲ್ಲ ಇವರ ಕೂಗು

ಬಿಸಿಲನಾಡು ಬಳ್ಳಾರಿಯಲ್ಲಿ ಇದೀಗ 40 ಡಿಗ್ರಿಗಿಂತಲೂ ಅಧಿಕ ಉಷ್ಣಾಂಶವಿದೆ. ಇಲ್ಲಿನ ರಂಜಿತ್ ಪುರ ....

ಬಳ್ಳಾರಿ: ಬಿಸಿಲನಾಡು ಬಳ್ಳಾರಿಯಲ್ಲಿ ಇದೀಗ 40 ಡಿಗ್ರಿಗಿಂತಲೂ ಅಧಿಕ ಉಷ್ಣಾಂಶವಿದೆ. ಇಲ್ಲಿನ ರಂಜಿತ್ ಪುರ ಗ್ರಾಮದ ಜನರು ಬಸ್ ನಿಲ್ದಾಣವೊಂದರಲ್ಲಿ ಕುಳಿತು ತಮ್ಮ ಪ್ರದೇಶದ ಬದುಕು-ಬವಣೆಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಗಣಿನಾಡಾಗಿರುವ ಬಳ್ಳಾರಿಯಲ್ಲಿ ಗಣಿಯಿಂದ ಕಲ್ಲಿದ್ದಲನ್ನು ಕೈಗಾರಿಕೆಗಳಿಗೆ ಸಾಗಿಸುವಾಗ ರಸ್ತೆ ಮೇಲೆಲ್ಲಾ ಧೂಳು. ರಸ್ತೆ ಬದಿಯಲ್ಲಿರುವ ಮನೆಗಳು ಧೂಳಿನಿಂದ ಕಾಪಾಡಿಕೊಳ್ಳಲು ರಸ್ತೆ ಮೇಲೆ ನೀರು ಹಾಕಲು ನೀರನ್ನು ಸಂಗ್ರಹಿಸಿಟ್ಟಿರುತ್ತಾರೆ. ಆದರೂ ಕೂಡ ಇಲ್ಲಿನ ಧೂಳಿನ ಬವಣೆ ತಪ್ಪಿದ್ದಲ್ಲ.

ರಂಜಿತ್ ಪುರ ಗ್ರಾಮದ ಇಡೀ ಗ್ರಾಮ ಧೂಳಿನಲ್ಲಿ ಮುಳುಗಿ ಹೋಗಿದೆ. ಇದರಿಂದ ಕೃಷಿ ಮೇಲೆ ದುಷ್ಪರಿಣಾಮ ಬೀರಿರುವುದಲ್ಲದೆ ಗ್ರಾಮಸ್ಥರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇಲ್ಲಿನವರಲ್ಲಿ ಕೆಲವರು ಗಣಿಗಾರಿಕೆಯಿಂದ ಹಣ ಸಂಪಾದಿಸಿರಬಹುದು. ಆದರೆ ಧೂಳಿನಿಂದಾಗಿ ಕಾಯಿಲೆಗಳು ಕೂಡ ಬರುತ್ತಿವೆ ಎನ್ನುತ್ತಾರೆ 63 ವರ್ಷದ ಚನ್ನಬಸಪ್ಪ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಗ್ರಾಮಸ್ಥರನ್ನು ಮಾತನಾಡಿಸಿದಾಗ, ನಮಗಿಲ್ಲಿ ಬದುಕುವುದು ಕಷ್ಟವಾಗಿದೆ. ಆದರೆ ನಮಗೆ ಬೇರೆ ಆಯ್ಕೆಗಳಿಲ್ಲ. ಧೂಳಿನಿಂದಾಗಿ ನಮಗೆ ಬಹಳ ಬೇಗನೆ ಕಾಯಿಲೆಗಳು ಬರುತ್ತಿವೆ ಎನ್ನುತ್ತಾರೆ. ಬಳ್ಳಾರಿಯ ಸಂಡೂರಿನಿಂದ 15 ಕಿಲೋ ಮೀಟರ್ ದೂರದಲ್ಲಿರುವ ರಂಜಿತ್ ಪುರದಲ್ಲಿ ನಿತ್ಯವೂ ಗಣಿ ಸಾಗಿಸುವ ಸಾವಿರಾರು ಟ್ರಕ್, ಲಾರಿಗಳು ಓಡಾಡಿ ಧೂಳೆಬ್ಬಿಸುತ್ತವೆ.

ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ಹೊಸತೇನಲ್ಲ. ರೆಡ್ಡಿ ಸೋದರರು ಗಣಿ ಉದ್ಯಮ ಆರಂಭಿಸುವ ಹಲವು ದಶಕಗಳ ಮೊದಲೇ ಇಲ್ಲಿ ಗಣಿಗಾರಿಕೆ ಆರಂಭವಾಗಿದ್ದು ರಾಷ್ಟ್ರಮಟ್ಟದಲ್ಲಿ ಅದು ಗುರುತಿಸಿಕೊಂಡಿದೆ. ಕಳೆದೆರಡು ದಶಕಗಳಲ್ಲಿ ಗಣಿಗಾರಿಕೆ ಹೆಚ್ಚಾಗಿದೆಯಷ್ಟೆ. ಇದಕ್ಕೆ ಬೇಡಿಕೆ ಹೆಚ್ಚಳ ಮತ್ತು ತಾಂತ್ರಿಕ ಸುಧಾರಣೆ ಕಾರಣವಾಗಿದೆ.

ಉದ್ಯಮದ ಬೆಳವಣಿಗೆ ಗ್ರಾಮದ ಜೀವನವನ್ನು ಬದಲಾಯಿಸಿದೆ. ಗ್ರಾಮಸ್ಥರಿಗೆ ಸೇರಿದ ಜಮೀನುಗಳನ್ನು ಗಣಿಗಾರಿಕೆಗೆ ಬಳಸಿಕೊಳ್ಳಲಾಗುತ್ತಿದ್ದು ಇದರಿಂದ ಕೃಷಿ ಜಮೀನು ಕಡಿಮೆಯಾಗಿದೆ. ಗಣಿಗಾರಿಕೆ ಪ್ರವರ್ಧಮಾನಕ್ಕೆ ಬರುವ ಮೊದಲು ಗ್ರಾಮಸ್ಥರು ಈರುಳ್ಳಿ, ಜೋಳ, ಮೆಕ್ಕೆಜೋಳ ಮತ್ತು ಇತರ ತರಕಾರಿಗಳನ್ನು ಬೆಳೆಯುತ್ತಿದ್ದರು. ಸುಮಾರು 200 ಎಕರೆ ಪ್ರದೇಶದಲ್ಲಿ ಬೆಳೆಯುತ್ತಿದ್ದ ತೋಟಗಾರಿಕೆ ಇದೀಗ 50 ಎಕರೆಗೆ ಇಳಿದಿದೆ.

ಯುವಸಮೂಹ ಪಟ್ಟಣ, ನಗರಗಳಿಗೆ ಕೆಲಸ ಹುಡುಕಿಕೊಂಡು ಹೋಗುತ್ತಿದೆ. ಇನ್ನು ಕೆಲವರು ತಮ್ಮ ಗ್ರಾಮದ ಹತ್ತಿರವಿರುವ ಗಣಿಗಾರಿಕೆ ಪ್ರದೇಶದಲ್ಲಿ ಕೆಲಸ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

ಆದರೆ ಕಂಪೆನಿಗಳು ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಅಗತ್ಯಕ್ಕೆ ತಕ್ಕಂತೆ ಇಲ್ಲಿನ ಯುವಕರಿಗೆ ತಿಂಗಳಲ್ಲಿ 8-10 ದಿನ ಕೆಲಸ ಸಿಗುತ್ತಿದ್ದು ಉಳಿದ ದಿನಗಳು ಬೇರೆ ಕೆಲಸ ಹುಡುಕಬೇಕಾದ ಪರಿಸ್ಥಿತಿಯಿದೆ. ಇವರಿಗೆ ದಿನಕ್ಕೆ 490 ರೂಪಾಯಿ ವೇತನ ಮತ್ತು 80 ರೂಪಾಯಿ ಊಟದ ಕೂಪನ್ ಕಂಪೆನಿ ನೀಡುತ್ತದೆ.

ನಾವಿಲ್ಲಿ ನಿತ್ಯ ಧೂಳಿನಿಂದ ಸಾಯುವ ಪರಿಸ್ಥಿತಿ ಬಂದಿದೆ. ಹೊರಗಿನವರಿಗೆ ಗಣಿ ಕಾರ್ಖಾನೆಯಲ್ಲಿ ಕೆಲಸ ಸಿಗುತ್ತದೆ. ಇದು ನ್ಯಾಯವೇ? ಎಂದು ಗ್ರಾಮಸ್ಥ ಜಡಿಯಪ್ಪ ಕೇಳುತ್ತಾರೆ. ಕೆಲವರು ಕಾರ್ಖಾನೆಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರತಿ ಚುನಾವಣೆಯಂತೆ ಈ ಬಾರಿ ಕೂಡ ಗ್ರಾಮಸ್ಥರು ವೋಟ್ ಕೇಳಲು ಬರುವ ರಾಜಕಾರಣಿಗಳಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಆದರೆ ರಾಜಕಾರಣಿಗಳಿಂದ, ಜನಪ್ರತಿನಿಧಿಗಳಿಂದ ಅವರಿಗೆ ಕೇವಲ ಭರವಸೆ ಮಾತ್ರ ಸಿಕ್ಕಿದೆಯಷ್ಟೆ.ಐದು ವರ್ಷಗಳಿಗೊಮ್ಮೆ ರಾಜಕಾರಣಿಗಳು ಬರುತ್ತಾರೆ ಎನ್ನುತ್ತಾರೆ ಸುಬ್ಬಣ್ಣ ಎಂಬ ವಯೋವೃದ್ಧ.
ಬಳ್ಳಾರಿಯ ಗಣಿಯಿಂದಾಗಿ ಸತ್ತ ಶವಗಳನ್ನು ಸುಡಲು ಕೂಡ ಭೂಮಿ ಇಲ್ಲದಾಗಿದೆ.

Related Stories

No stories found.

Advertisement

X

Advertisement

X
Kannada Prabha
www.kannadaprabha.com