ಕೊಪ್ಪಳ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಹಾಸ್ಯನಟರಂತೆ ವರ್ತಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ವಿರುದ್ಧ ಅವರಾಡುವ ಮಾತುಗಳನ್ನು ನಂಬುವಷ್ಟು ಈ ರಾಜ್ಯದ ಜನತೆ ಮೂರ್ಖರಲ್ಲ, ಅವರ ಮಾತುಗಳು ಏನೆಂದು ಜನತೆಗೆ ಅರ್ಥವಾಗುತ್ತದೆ. ಅವರ ನಟನೆಗೆ ತೆರೆ ಎಳೆಯುವ ಸಮಯ ಹತ್ತಿರ ಬಂದಿದೆ. ಜನರು ಮೇ 12ರಂದು ಕ್ಲೈಮಾಕ್ಸ್ ತೀರ್ಪು ನೀಡಲಿದ್ದಾರೆ ಎಂದರು.
ದೇವೇಗೌಡರ ವಿರುದ್ಧ ಆರೋಪಿಸುವ ಬದಲು ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ಮೋದಿಯವರು ರಾಜ್ಯದ ಜನತೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ತೋರಿಸಲಿ ಎಂದು ಒತ್ತಾಯಿಸಿದರು. ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಸೋಲುವ ಭೀತಿ ಹೊಂದಿರುವುದರಿಂದ ಸಿನಿಮಾ ನಟರನ್ನು ಕರೆತಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಚಾರ ನಡೆಸುತ್ತಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
Advertisement