ಬೆಂಗಳೂರು : ಆರು ವಾರ್ಡ್ ಗಳನ್ನೊಗೊಂಡಿರುವ ಸದಾ ಜನ ದಟ್ಟಣೆಯಿಂದ ಕೂಡಿರುವ ಚಿಕ್ಕಪೇಟೆ ನಗರದ ಹೃದಯಭಾಗವಾಗಿದೆ. 2008ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಹೇಮಚಂದ್ರ ಸಾಗರ್ ಅವರನ್ನು ಆರ್ . ವಿ. ದೇವರಾಜ್ ಅವರು ಸೋಲಿಸಿದ್ದರು. 2013ರಲ್ಲಿ ಉದ್ಯಮಿ ಉದಯ್ ಗರುಡಚಾರ್ ಅವರನ್ನು ಸೋಲಿಸಿದ್ದ ಆರ್ . ವಿ. ದೇವರಾಜ್ ಈ ಬಾರಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಮೂಲಸೌಕರ್ಯ ಕೊರತೆ, ಮಾಲಿನ್ಯ, ಕುಡಿಯುವ ನೀರು, ಮತ್ತಿತರ ಸಮಸ್ಯೆಗಳೇ ಈ ಚುನಾವಣೆಯ ಪ್ರಮುಖ ವಿಷಯಗಳಾಗಿವೆ. ನಮ್ಮ ಮೆಟ್ರೋ ರೈಲು ನಿಲ್ದಾಣ ಹೊರತುಪಡಿಸಿದರೆ ಉಳಿದಂತೆ ಅಂತಹ ಹೇಳಿಕೊಳ್ಳುವಂತಹ ಕೆಲಸಗಳಾಗಿಲ್ಲ. ಆರ್. ವಿ. ದೇವರಾಜ್ ಅವರ ಪುತ್ರ ಯುವರಾಜ್ ಸುಧಾಮನಗರದ ಕಾರ್ಪೋರೇಟರ್ ಆಗಿದ್ದಾರೆ.
ಆರ್. ವಿ. ದೇವರಾಜ್ ತಮ್ಮ ಟ್ರಸ್ಟಿನ ಮೂಲಕ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ಶಿಕ್ಷಣ ನೀಡುತ್ತಿದ್ದಾರೆ. ಇದು ಮತ ಸಂಗ್ರಹದ ಪ್ರಮುಖ ಮೂಲವಾಗಿದೆ. ವಿಶೇಷವಾಗಿ ತಮಿಳರು ಹೆಚ್ಚಿರುವ ಕೊಳಚೆ ಪ್ರದೇಶಗಳಲ್ಲಿ ಹಬ್ಬಗಳ ಸಂದರ್ಭದಲ್ಲಿ ದೇವರಾಜ್ ಆಹಾರ ವಿತರಿಸುವ ಮೂಲಕ ಜನಪ್ರಿಯರಾಗಿದ್ದಾರೆ.
ಇನ್ನೂ ಇಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಉದಯ್ ಬಿ. ಗರುಡಾಚಾರ್ ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರತ್ಯಕ್ಷರಾಗುತ್ತಾರೆ. ಕ್ಷೇತ್ರದ ಜನರು ಹೆಚ್ಚಿನ ಬಾರಿ ನೋಡಿಯೇ ಇಲ್ಲ. ನೋಟು ರದ್ದತಿ ಮತ್ತು ಜಿಎಸ್ ಟಿ ಜಾರಿಯ ನಂತರ ಮೊದಲ ಬಾರಿಗೆ ಚುನಾವಣೆಯಾಗುತ್ತಿದ್ದು, ಹಲವು ಉದ್ಯಮಿಗಳು ಕಾಂಗ್ರೆಸ್ ಪರ ಮತ ಚಲಾಯಿಸುವುದಾಗಿ ಹೇಳುತ್ತಿದ್ದಾರೆ.
ಡಾ. ಹೇಮಚಂದ್ರ ಸಾಗರ್ ಬಿಜೆಪಿಯಿಂದ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗೆ ಪೈಪೋಟಿ ನೀಡುತ್ತಿದ್ದಾರೆ.
Advertisement