ಬೆಂಗಳೂರು: ಚುನಾವಣಾ ಆಯೋಗದ ಆಪ್ ನಲ್ಲಿ ಅಗತ್ಯಬಿದ್ದರೆ ವೀಲ್ ಚೇರ್ ಸೌಕರ್ಯ ಒದಗಿಸುವುದಾಗಿ ಹೇಳಲಾಗಿತ್ತು. ಆದರೆ, ಪ್ರತಿಗಟ್ಟೆಗೆ ಒಂದರಂತೆಯೂ ಕೂಡಾ ವೀಲ್ ಚೇರ್ ವ್ಯವಸ್ಥೆ ಮಾಡಿರಲಿಲ್ಲ. ನಗರದಾದ್ಯಂತ ಇಂತಹ ಮಾತುಗಳು ಕೇಳಿಬರುತ್ತಿತ್ತು. ಇದರಿಂದಾಗಿ ಹಿರಿಯ ವ್ಯಕ್ತಿಗಳು ಮತಗಟ್ಟೆ ಬಳಿ ಘಾಸಿ ಎದುರಿಸುವಂತಾಯಿತು.
ಮತದಾನಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ದಿವ್ಯಾಂಗರಿಗೆ ಪ್ರತ್ಯೇಕ ಡೇಟಾಬೇಸ್ ರಚನೆಯಾಗುತ್ತದೆ ಎಂದು ಚುನಾವಣೆಗೂ ಮುನ್ನ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದರು. ಆದರೆ. ಪದ್ಮನಾಭನಗರದ ಸರ್ಕಾರಿ ಶಾಲೆಯಲ್ಲಿ ಹಿರಿಯ ನಾಗರಿಕ ಮಹಿಳೆಯೊಬ್ಬರು ಮೆಟ್ಟಿಲು ಇಳಿಯಲು ಸಾಧ್ಯವಾಗದೆ ಪೊಲೀಸ್ ಸಿಬ್ಬಂದಿಗಳು ಎತ್ತಿಕೊಂಡು ಹೋಗಿ ಮತ ಚಲಾಯಿಸಿದ್ದರು.
ನಾರಾಯಣ ಪಿಯು ಕಾಲೇಜ್ ಬಳಿಯ ಸ್ಥಾಪಿಸಲಾಗಿದ್ದ ಮತಗಟ್ಟೆ 310 ಹಾಗೂ 311ರಲ್ಲಿ ಮತ ಚಲಾಯಿಸಲು ದೋಣೆ ಹಿಡಿದುಕೊಂಡೇ ಬಂದಿದ್ದ 80 ವರ್ಷದ ವಿ. ಪಿ. ರಮಣ್ ಅಗತ್ಯ ಸೌಕರ್ಯವಿಲ್ಲದೆ ತೊಂದರೆ ಎದುರಿಸುವಂತಾಯಿತು. ಆಕೆಯ ಮಗಳ ಕಾರನ್ನು ಕಾಲೇಜ್ ಒಳಗೆ ಪಾರ್ಕಿಂಗ್ ಮಾಡಲು ಸಹ ಅವಕಾಶ ನೀಡಲಿಲ್ಲ. ಹಿರಿಯ ನಾಗರಿಕರಿಗೆ ಸಹಾಯ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಬೇಕೆಂದು ಅವರು ಮನವಿ ಮಾಡಿಕೊಂಡರು..
ವೀಲ್ ಚೇರ್ ಸಹಾಯದಿಂದಲೇ ಬಂದಿದ್ದ 72 ವರ್ಷದ ವಯೋವೃದ್ಧರೊಬ್ಬರು ಮಹದೇವಪುರ ಪ್ರವೇಶದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಇವರು ಮೆಟ್ಟಿಲು ಹತ್ತಲು , ಇಳಿಯಲು ಸಾಧ್ಯವಾಗದೆ ಚುನಾವಣಾ ಅಧಿಕಾರಿ ಸೇರಿದಂತೆ ಮೂವರು ನೆರವಿಗೆ ಧಾವಿಸುವಂತಾಯಿತು.
ದಿವ್ಯಾಂಗರಿಗೆ ಮತದಾನದ ಸಂದರ್ಭದಲ್ಲಿ ಅನುಕೂಲಕ್ಕಾಗಿ ಶಾಶ್ವತವಾದ ಸೌಲಭ್ಯವನ್ನು ರಚಿಸಬೇಕೆಂದು ರಾಜ್ಯ ದಿವ್ಯಾಂಗರ ಆರೈಕೆ ಒಕ್ಕೂಟದ ಅಧ್ಯಕ್ಷ ಜಿ.ಎನ್. ನಾಗರಾಜ್ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಮತದಾನದ ಸಂದರ್ಭದಲ್ಲಿ ತಾವೂ ಯಾವ ರೀತಿ ಮತ ಚಲಾಯಿಸಬೇಕಾಯಿತು ಎಂಬುದರ ಬಗ್ಗೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಸುನೀಲ್ ಜೈನ್ ಎಂಬ ದಿವ್ಯಾಂಗರು ತನ್ನ ಪೇಸ್ ಬುಕ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ. ಮತ ಚಲಾಯಿಸಲು ಏನೆಲ್ಲಾ ಕಷ್ಟಪಡಬೇಕಾಯಿತು ಎಂಬುದನ್ನು ಅವರು ಹೇಳಿಕೊಂಡಿದ್ದಾರೆ. ದಿವ್ಯಾಂಗರು ಮತದಾನದ ಸಂದರ್ಭದಲ್ಲಿ ಎನ್ ಜಿ ಒ ಅಸ್ಥಾ ನರೆವು ಪಡೆದುಕೊಳ್ಳುವಂತೆ ಅವರು ತಿಳಿಸಿದ್ದಾರೆ.
Advertisement