ಬಳ್ಳಾರಿ: ರಾಮನಗರ ಚುನಾವಣಾ ಕಣದಿಂದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ಹಿಂದೆ ಸರಿಯುವುದಕ್ಕೆ ಡಿಕೆಶಿ ಬ್ರದರ್ಸ್ಕಾರಣ ಆರೋಪಕ್ಕೆ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ಚಂದ್ರಶೇಖರ್ ಹಿಂದೆ ಸರಿದಿರುವ ಬಗ್ಗೆ ನನಗೇನು ಗೊತ್ತಿಲ್ಲ. ನನ್ನ ಗಮನಕ್ಕೇನು ಬಂದಿತ್ತೆಂದರೆ ಯೋಗೇಶ್ವರ್, ಅಶ್ವಥ್ ನಾರಾಯಣ್ ಸೇರಿ ಹಲವು ಬಿಜೆಪಿ ಮುಖಂಡರು ನ.6 ರಂದು ಬಿಜೆಪಿ ಸರ್ಕಾರ ರಚನೆ ಮಾಡುತ್ತಾರೆ. ಬ್ಯಾಗ್ಗಳಲ್ಲಿ ದುಡ್ಡಿನ ಕಂತೆ ತೆಗೆದುಕೊಂಡು ನಮ್ಮ ಎಂಎಲ್ಎಗಳಿಗೆ ಕೇಳಲಿದ್ದಾರೆ. ಇದೇ ನಿಟ್ಟಿನಲ್ಲಿ ಬಿಎಸ್ವೈ ಕೂಡ ನ.6ರಂದು ಸರ್ಕಾರ ರಚನೆ ಮಾಡುವುದಾಗಿ ಹೇಳಿದ್ದರು ಎಂದು ಟಾಂಗ್ ನೀಡಿದರು.
ನಾನು ರಾಮನಗರಕ್ಕೆ ಹೋಗೇ ಇಲ್ಲ. ಇದರ ಬಗ್ಗೆ ನನಗೇನು ಗೊತ್ತಿಲ್ಲ. ಇಂದು ರಾಮನಗರಕ್ಕೆ ತೆರಳಿ ಧ್ವಜಾರೋಹಣ ಮಾಡಬೇಕೆಂದಿದ್ದೆ. ಆದರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂಬ ಕಾರಣಕ್ಕೆ ಅಲ್ಲಿಗೆ ತೆರಳಿಲ್ಲ ಎಂದು ಸ್ಪಷ್ಟನೆ ನೀಡಿದರು.
ಚಂದ್ರಶೇಖರ್ ಅವರ ಆಪರೇಷನ್ ಕುರಿತು ಮಾಹಿತಿ ಇರಲಿಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ , ಬಿಜೆಪಿಯವರನ್ನು ಆಪರೇಟ್ ಮಾಡುವುದಕ್ಕಾಗುತ್ತೇನ್ರಿ? ಅವರು ಬಹಳ ನಿಸ್ಸೀಮರು, ಅವರನ್ನು ಆಪರೇಟ್ ಮಾಡುವುದು ಅಸಾಧ್ಯ. ನಾನು ಯಾವುದೇ ಹಣ ಕೊಟ್ಟಿಲ್ಲ ಎಂದು ಹೇಳಿದ್ದಾರೆ.