ಬಳ್ಳಾರಿ: ನಾನು 420 ಅಲ್ಲ. 108 ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಷ್ಟು ಬುದ್ಧಿವಂತ ಅಲ್ಲ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಅವರು ಗುರುವಾರ ಮಾಜಿ ಸಿಎಂಗೆ ತಿರುಗೇಟು ನೀಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶ್ರೀರಾಮುಲು, ಸಿದ್ದರಾಮಯ್ಯ ಅವರು ನನಗೆ ಕನ್ನಡ ಬರುವುದಿಲ್ಲ ಎನ್ನುತ್ತಾರೆ. ನಾನು ಮಾತನಾಡುವುದು ಗ್ರಾಮೀಣ ಸೊಗಡಿನ ಕನ್ನಡ, ನಾನು ಸಿದ್ದರಾಮಯ್ಯ ಅವರಷ್ಟು ಬುದ್ಧಿವಂತನಲ್ಲ, ದಡ್ಡ ಅನ್ನುವುದನ್ನು ಒಪ್ಪಿಕೊಳ್ಳುತ್ತೇನೆ ಅಂದರು.
ಸಿದ್ದರಾಮಯ್ಯ ಅವರು ನನ್ನನ್ನು 420 ಎಂದು ಕರೆದರು. ಆದರೆ ಈ ರಾಜ್ಯದ ಜನ ನನ್ನನ್ನು 108 ಶ್ರೀರಾಮುಲು ಅಂತ ಕರೆಯುತ್ತಾರೆ. ಬಡವರಿಗಾಗಿ ವಿಶೇಷ ಅಂಬುಲೆನ್ಸ್ ವ್ಯವಸ್ಥೆ ನಾನು ಮಾಡಿಸಿದ್ದನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದರು.
2004ರ ಮುಂಚೆ ಬಳ್ಳಾರಿ ಹೇಗಿತ್ತು, ಈಗ ಹೇಗಾಗಿದೆ? ಎಂದು ಪ್ರಶ್ನಿಸಿದ ಶ್ರೀರಾಮುಲು, ಅಭಿವೃದ್ಧಿ ಆಗಿದೆ ಅಂತಾ ಬಳ್ಳಾರಿ ಜನಾನೇ ಮಾತಾಡ್ತಿದ್ದಾರೆ. 500 ಕೋಟಿ ರುಪಾಯಿ ಖರ್ಚು ಮಾಡಿ ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ ಮಾಡಿದ್ದೇವೆ. ಆದರೆ ಬಡಾಯಿ ಕೊಚ್ಚಿಕೊಳ್ಳುವ ಈ ಸರ್ಕಾರ 500 ಕೋಟಿ ರುಪಾಯಿ ಅನುದಾನವನ್ನು ಬಳ್ಳಾರಿ ಜಿಲ್ಲೆಗೆ ಕಡಿತ ಮಾಡಿ ಅವಮಾನ ಮಾಡಿದೆ ಎಂದು ಆರೋಪಿಸಿದರು.