ಬೆಂಗಳೂರು: ಎರಡನೇ ಅವಧಿಗೆ ಮುಖ್ಯಮಂತ್ರಿ ಪಟ್ಟ ಕೈ ತಪ್ಪಿ ಹೋಗಿದ್ದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರು ತೀವ್ರ ಅಸಮಾಧಾನ ತಂದಿದೆ ಎಂದು ಅವರ ಮಾತಿನಲ್ಲಿಯೇ ಗೊತ್ತಾಗುತ್ತದೆ. 2018ರಲ್ಲಿ ತಮಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿ ಹೋಗಲು ಕೆಲವು ನಾಯಕರ ಅಸೂಯೆಯೇ ಕಾರಣ, ಇಲ್ಲದಿದ್ದರೆ ಪುನಃ ನಾನು ಸಿಎಂ ಆಗಿ ಆಯ್ಕೆಯಾಗುತ್ತಿದ್ದೆ ಎಂದಿದ್ದಾರೆ.
ಸಿದ್ದರಾಮಯ್ಯನವರು ಹೀಗೆ ಹೇಳಿದ್ದು ಕರ್ನಾಟಕ ಅಹಲ್ಯಾಬಾಯಿ ಹೊಲ್ಕರ್ ಸಂಘ ಮತ್ತು ಪ್ರದೇಶ ಕುರುಬ ಸಂಘ ಆಯೋಜಿಸಿದ್ದ ಮಹಿಳೆಯರ ಅರಿವು ಸಮ್ಮೇಳನದಲ್ಲಿ. ಈ ವೇಳೆ ಮಾತನಾಡಿದ ಅವರು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷನಾಗಿ ತಮ್ಮ ಪಾತ್ರದ ಕುರಿತು ಮಾತನಾಡುತ್ತಾ ತಮ್ಮದೇ ಪಕ್ಷದ ಕೆಲವು ನಾಯಕರಿಗೆ ಪರೋಕ್ಷವಾಗಿ ಮಾತಿನ ಮೂಲಕ ತಿವಿದರು.
ಹೊಟ್ಟೆಕಿಚ್ಚು, ಅಸೂಯೆಗೆ ನಮ್ಮಲ್ಲಿ ಮದ್ದಿಲ್ಲ, ಹಿಂದುಳಿದ ಸಮುದಾಯಗಳ ರಾಜಕೀಯ ನಾಯಕರು ಬೆಳವಣಿಗೆ ಹೊಂದುವುದು, ಮುಂದೆ ಬರುವುದೆಂದರೆ ಕೆಲವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ, ಈ ಹೊಟ್ಟೆಕಿಚ್ಚಿನಿಂದಾಗಿ ಕಳೆದ ಚುನಾವಣೆ ನಂತರ ತಮಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶ ಇದ್ದರೂ ಕೂಡ ನನಗೆ ನಿರಾಕರಿಸಲಾಯಿತು ಎಂದು ಬಹಿರಂಗವಾಗಿ ಅಸಮಾಧಾನವನ್ನು ಹೊರಹಾಕಿದ್ದಾರೆ.
ತಾವು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವ ಆಕಾಂಕ್ಷೆ ಹೊಂದಿದ್ದೆ ಎಂದು ಕಳೆದ ಆಗಸ್ಟ್ ನಲ್ಲಿ ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯನವರು ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದ್ದರು. ತಮ್ಮ ಎದುರಾಳಿಗಳ ಕುತಂತ್ರದಿಂದ ಕೈ ತಪ್ಪಿ ಹೋಯಿತು ಎಂದಿದ್ದರು. ನಂತರ ಸ್ವತಃ ಸಿಎಂ ಕುಮಾರಸ್ವಾಮಿಯವರೇ, ಸಿದ್ದರಾಮಯ್ಯನವರು ಜನರ ಆಶೀರ್ವಾದ ಸಿಕ್ಕಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗುವೆ ಎಂದು ಹೇಳಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಆ ರಾಜಕೀಯ ಬಿರುಗಾಳಿ ಅಲ್ಲಿಗೇ ತಣ್ಣಗಾಗಿತ್ತು.
Advertisement