ನಟ ದರ್ಶನ್
ರಾಜಕೀಯ
ಸಾಲ ಮನ್ನಾ ಬದಲು ರೈತರ ಬೆಳೆಗೆ ಸೂಕ್ತ ಬೆಲೆ ಕೊಡಿ: ಸಿಎಂಗೆ ನಟ ದರ್ಶನ್ ಪರೋಕ್ಷ ಟಾಂಗ್
'ರೈತರ ಸಾಲಮನ್ನಾ ಮಾಡುವ ಬದಲು ಅವರು ಬೆಳೆದ ಬೆಲೆಗೆ ಸೂಕ್ತ ಬೆಲೆ ನೀಡಲಿ ಸಾಕು, ಸಾಲವನ್ನು ರೈತರೇ ತೀರಿಸುತ್ತಾರೆ' ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್.....
ಬೆಂಗಳೂರು: 'ರೈತರ ಸಾಲಮನ್ನಾ ಮಾಡುವ ಬದಲು ಅವರು ಬೆಳೆದ ಬೆಲೆಗೆ ಸೂಕ್ತ ಬೆಲೆ ನೀಡಲಿ ಸಾಕು, ಸಾಲವನ್ನು ರೈತರೇ ತೀರಿಸುತ್ತಾರೆ' ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಇಂದು ನಗರದ ಬಿಐಟಿ ಕಾಲೇಜಿನಲ್ಲಿ ನಡೆದ ಜೈ ಜವಾನ್ ಜೈ ಕಿಸಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ದರ್ಶನ್, ಸರ್ಕಾರ ರೈತರ ಸಾಲ ಮನ್ನಾ ಮಾಡುವುದು ಬೇಡ. ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯವಾದ ಬೆಲೆ ಕೊಟ್ರೆ ಸಾಕು. ರೈತರೇ ಸಾಲ ಮರು ಪಾವತಿ ಮಾಡಿಕೊಳ್ಳುತ್ತಾರೆ ಎಂದರು.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಮಾತನಾಡಿದ ದರ್ಶನ್, ಕೆಲವರು ಸಾಲ ಮನ್ನಾ ಮಾಡಿದ್ದೀವಿ ಅಂತಾರೆ. ಆದರೆ ರೈತರ ಸಾಲ ಮನ್ನಾ ಮಾಡೋದು ಬೇಡ, ಅವರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಕೊಟ್ರೆ ಸಾಕು, ಅವರೇ ಸಾಲ ಮರುಪಾವತಿ ಮಾಡುತ್ತಾರೆ ಎಂದರು.
ರೈತ ಈ ದೇಶದ ಬೆನ್ನೆಲುಬು. ತುಂಬಾ ಕಡೆ ಹೇಳಬೇಕೆಂದಿದ್ದೆ, ಸಾಲ ಮನ್ನಾ, ಸಾಲಾಮನ್ನಾ ಎಂದು ಹೇಳುತ್ತಾರೆ. ಆದರೆ ರೈತರ ಸಾಲಮನ್ನಾ ಮಾಡಬೇಕೆಂದಿಲ್ಲ. ಅವರಿಗೆ ನ್ಯಾಯವಾದ ಬೆಲೆ ನೀಡಿದರೆ ಸಾಕು. ಅವರೇ ಸಾಲ ಕಟ್ಟುತ್ತಾರೆ ಎಂದರು.
ಈ ಹಿಂದೆ ಮಂಡ್ಯದ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರೈತರ ಮಗ, ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತ್ತಾರಲ್ಲ, ಅವರು ಒಂದು ಲೋಟ ಹಾಲು ಕರೆದು ತೋರಿಸಲಿ ನೋಡೋಣ. ಬೇಡ, ಹಸು ಮರಿ ಹಾಕಿದಾಗ ಅದಕ್ಕೆ ಏನು ಆಹಾರ ಕೊಡುತ್ತಾರೋ ಹೇಳಿ ಬಿಡಲಿ ನೋಡೋಣ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಿಖಿಲ್ಗೆ ಸವಾಲು ಹಾಕಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ