ಆನಂದ್ ಸಿಂಗ್ ಈಗಲೂ ನನ್ನ ಅಣ್ಣಾನೇ - ಕಂಪ್ಲಿ ಶಾಸಕ ಜಿಎನ್ ಗಣೇಶ್
ಬಳ್ಳಾರಿ: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿತಗೊಂಡು ಜೈಲು ಸೇರಿದ್ದ ಕಂಪ್ಲಿ ಶಾಸಕ ಜಿಎನ್ ಗಣೇಶ್ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.
ಶನಿವಾರ ಹಿರಿಯ ಮುಖಂಡ ಸೂರ್ಯನಾರಾಯಣ ರೆಡ್ಡಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಎನ್ ಗಣೇಶ್, ಆನಂದ್ ಸಿಂಗ್ ಈಗಲೂ ನನ್ನ ಅಣ್ಣಾನೇ, ಆದರೆ, ಅವರು ನನ್ನ ಮೇಲೆ ಕೋಪಗೊಂಡಿದ್ದಾರೆ. ಎಲ್ಲವೂ ಉತ್ತಮಗೊಳ್ಳಲಿದ್ದು, ಎಂದಿನಂತೆ ನಮ್ಮ ನಡುವಿನ ಸಂಬಂಧ ಮುಂದುವರೆಯುವ ಭರವಸೆ ಇದೆ ಎಂದು ಹೇಳಿದರು.
ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಆನಂದ್ ಸಿಂಗ್ ಮೇಲೆ ಬಾಟಲಿಯಿಂದ ಜಿಎನ್ ಗಣೇಶ್ ಹಲ್ಲೆ ನಡೆಸಿದ್ದರು. ನಂತರ ಆನಂದ್ ಸಿಂಗ್ ಆಸ್ಪತ್ರೆ ಸೇರಿ ನಂತರ ಬಿಡುಗಡೆಯಾಗಿದ್ದರು. ಗಣೇಶ್ ಅವರನ್ನು ಫೆಬ್ರವರಿ ತಿಂಗಳಲ್ಲಿ ಬಂಧಿಸಲಾಗಿತ್ತು.
ಆದರೆ, ಇದೊಂದು ಚಿಕ್ಕ ಘಟನೆ ಎನ್ನುವ ಗಣೇಶ್, ರೆಸಾರ್ಟ್ ನಲ್ಲಿ ಏನು ನಡೆಯಿತು ಎಂಬ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ. ಆನಂದ್ ಸಿಂಗ್ ಅವರನ್ನು 15 ವರ್ಷದಿಂದ ತಿಳಿದಿದ್ದೇನೆ. ಈಗಲೂ ಕೂಡಾ ಅವರಿಗೆ ಗೌರವ ಕೊಡುತ್ತೇನೆ. ಅವರು ತಿರಸ್ಕರಿಸಿದ್ದರೂ ಸಹ ನನ್ನ ಅಣ್ಣಾನಾಗಿಯೇ ಅವರು ಇರುತ್ತಾರೆ ಎಂದು ಹೇಳಿದರು.
ಮೂರು ತಿಂಗಳ ಹಿಂದಿನ ಪರಿಸ್ಥಿತಿ ಈಗ ಬದಲಾಗಿದ್ದು, ಕಾಂಗ್ರೆಸ್ ಪಕ್ಷ ತಮ್ಮ ಮೇಲಿನ ಉಚ್ಚಾಟನೆ ಆದೇಶವನ್ನು ಹಿಂಪಡೆಯುವ ವಿಶ್ವಾಸವನ್ನು ಗಣೇಶ್ ಹೊಂದಿದ್ದಾರೆ. ಇದರ ಉದ್ದೇಶಕ್ಕಾಗಿ ಸೂರ್ಯನಾರಾಯಣ ಅವರ ಸಹಾಯವನ್ನು ಪಡೆಯುತ್ತಿದ್ದಾರೆ. ಸೂರ್ಯನಾರಾಯಣ ಅವರನ್ನು ರಾಜಕೀಯದ ಗುರು ಎಂದು ಗಣೇಶ್ ಪರಿಗಣಿಸಿದ್ದು, ಈ ವಿಚಾರದಲ್ಲಿ ಅವರನ್ನು ಏನನ್ನೂ ಸಲಹೆ ಮಾಡುತ್ತಾರೋ ಅದನ್ನು ಪಾಲಿಸುವುದಾಗಿ ಗಣೇಶ್ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ