ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಪ್ರತ್ರಿಮೆ ಸ್ಥಾಪಿಸಿದರೇ ಸೂಕ್ತ ಕ್ರಮ: ಮಾಧುಸ್ವಾಮಿ ಎಚ್ಚರಿಕೆ
ಹಾಸನ: ಮೂರ್ತಿ ನಿರ್ಮಾಣ ಮಾಡುವುದು ಅವರ ಭಾನೆಗಳಿಗೆ ಬಿಟ್ಟ ವಿಚಾರವಾಗಿದೆ. ಆದರೆ ಇದಕ್ಕೆ ಸರ್ಕಾರಿ ಭೂಮಿಯನ್ನು ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಈ ಭೂಮಿಯನ್ನು ವಾಪಸ್ ಪಡೆಯುವ ಬಗ್ಗೆ ಕಂದಾಯ ಸಚಿವರ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಕನಕಪುರದಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಉದ್ದೇಶಿತ ಯೇಸು ಪ್ರತಿಮೆ ಸ್ಥಾಪನೆ ವಿವಾದ ಸಂಬಂಧ ಪ್ರತ್ರಿಕ್ರಿಯಿಸಿದರು, ಗೋಮಾಳ ಭೂಮಿಯನ್ನು ಈ ರೀತಿಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಸರ್ಕಾರಿ ಭೂಮಿಯನ್ನು ಹೀಗೆ ಬಳಕೆ ಮಾಡಿಕೊಂಡರೆ ಕೋರ್ಟ್ ಕೂಡ ಒಪ್ಪುವುದಿಲ್ಲ. ಪ್ರತಿಮೆ ಮಾಡಬಾರದು ಎಂದು ಹೇಳಿಲ್ಲ. ಆದರೆ ಸರ್ಕಾರ ಭೂಮಿಯನ್ನು ಹೋಗೆ ಬಳಸುವುದು ಸರಿಯಲ್ಲ ಎಂದರು.
ಕರ್ನಾಟಕ ಭೂ ಸುಧಾರಣಾ ಕಾಯ್ದೆ ಪ್ರಕಾರ ಗೋಮಾಳ ಜಮೀನಿನಲ್ಲಿ ದೇವಸ್ಥಾನ, ಮಠಮಂದಿರಗಳು, ಮಸೀದಿ, ಚರ್ಚ್ ಬುದ್ದವಿಹಾರಗಳು ಸೇರಿದಂತೆ ಯಾವುದೇ ಧರ್ಮದ ಪ್ರಾರ್ಥನಾ ಮಂದಿರಗಳನ್ನು ನಿರ್ಮಾಣ ಮಾಡುವಂತಿಲ್ಲ. ಗೋಮಾಳ ಜಮೀನನ್ನು ಭೂ ರಹಿತರಿಗೆ ವಿತರಣೆ ಮಾಡುವುದು, ಗೋಶಾಲೆ ನಿರ್ಮಾಣ, ಸ್ಮಶಾನ ನಿರ್ಮಾಣ ಸೇರಿದಂತೆ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬೇಕೆಂಬ ನಿಯಮವಿದೆ ಎಂದು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಗೋಲಿಬಾರ್ ವಿಚಾರವಾಗಿಯೂ ಪ್ರತಿಕ್ರಿಯಿಸಿ, ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ ಎಂದು ಸಿಎಂ ಹೇಳಿದ್ದಾರೆ. ಘೋಷಣೆ ಆಗದಿದ್ದ ಮೇಲೆ ವಾಪಸ್ ತೆಗೆದುಕೊಳ್ಳುವ ಪ್ರಶ್ನೆ ಎಲ್ಲಿಂದ ಬರಲಿದೆ. ಅಮಾಯರಾದರೆ ಮಾತ್ರ ಪರಿಹಾರ ನೀಡುತ್ತೇವೆ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ. ಅವರೂ ಹಿಂಸಾಚಾರದ ಆರೋಪಿಗಳಾಗಿದ್ದಲ್ಲಿ ಪರಿಹಾರ ನೀಡಲು ಹೇಗೆ ಸಾಧ್ಯ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ರಾಜ್ಯದಲ್ಲಾಗಲೀ, ದೇಶದಲ್ಲಾಗಲೀ ತುರ್ತು ಪರಿಸ್ಥಿತಿ ಹೇರುವ ಪರಿಸ್ಥಿತಿ ಬಂದಿಲ್ಲ ‘ರೇವಣ್ಣ ಅವರಿಗೆ ಏಕೆ ಹಾಗೆ ಅನ್ನಿಸಿದೆಯೋ ಗೊತ್ತಿಲ್ಲ. ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆ ಚೆನ್ನಾಗಿಯೇ ಇದೆ’ ಎನ್ನುವ ಮೂಲಕ ಬಿಜೆಪಿ ಸರ್ಕಾರ ತುರ್ತು ಪರಿಸ್ಥಿತಿ ಹೇರಲು ಮುಂದಾಗಿದೆ ಎಂದು ಹೇಳಿಕೆ ನೀಡಿದ್ದ ರೇವಣ್ಣಗೆ ತಿರುಗೇಟು ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ