ವಿಧಾನಪರಿಷತ್ ಕಲಾಪ ಅಪರಾಹ್ನದವರೆಗೆ ಮುಂದೂಡಿಕೆ

ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನದ ಎರಡನೇ ದಿನವಾದ ಗುರುವಾರ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಕೋಲಾಹಲ ಉಂಟುಮಾಡಿದ ...
ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವಾಗ ಬಿಜೆಪಿ ಸದಸ್ಯರ ಪ್ರತಿಭಟನೆ ಚಿತ್ರ
ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವಾಗ ಬಿಜೆಪಿ ಸದಸ್ಯರ ಪ್ರತಿಭಟನೆ ಚಿತ್ರ

ಬೆಂಗಳೂರು: ರಾಜ್ಯ ಮೈತ್ರಿ ಸರ್ಕಾರದ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಸದಸ್ಯರು ವಿಧಾನಪರಿಷತ್ತಿನಲ್ಲೂ ಧರಣಿ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಅಡ್ಡಿಪಡಿಸಿದ ಕಾರಣ ಕಲಾಪವನ್ನು ಅಪರಾಹ್ನ 3 ಗಂಟೆ ವರೆಗೆ ಮುಂದಕ್ಕೆ ಹಾಕಲಾಯಿತು.

ಸದನದ ಕಲಾಪ ಆರಂಭವಾಗುತ್ತಿದ್ದಂತೆ ‘ಕೊಡಿ ಕೊಡಿ ರಾಜೀನಾಮೆ ಕೊಡಿ’ ಎಂಬ ಭಿತ್ತಿ ಫಲಕಗಳನ್ನು ವಿರೋಧಿ ಸದಸ್ಯರು ಪ್ರದರ್ಶನ ಮಾಡಿ ಗದ್ದಲ ಉಂಟು ಮಾಡಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಶಾಸಕರೂ ಕೂಡ ಭಿತ್ತಿ ಫಲಕ ಪ್ರದರ್ಶನ ಮಾಡಿದರು. ಹೀಗಾಗಿ ಸದನದಲ್ಲಿ ಆರೋಪ, ಪ್ರತ್ಯಾರೋಪ, ಗದ್ದಲ ಹೆಚ್ಚಾದ ಕಾರಣ ಕಲಾಪವನ್ನು ಮುಂದೂಡಲಾಯಿತು.

ಸರ್ಕಾರಕ್ಕೆ ಬಹುಮತವಿಲ್ಲ, ರಾಜ್ಯಪಾಲರಿಂದ ಸುಳ್ಳು ಹೇಳಿಸಿದ್ದಾರೆ ಎಂದು ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಸಭಾಪತಿ ಪೀಠದ ಮುಂಭಾಗ ಬಿಜೆಪಿ ಸದಸ್ಯರು ಧರಣಿ ನಡೆಸಿದರು.

ಆಗ ಮಾತನಾಡಿದ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ರಾಜ್ಯ ಸರ್ಕಾರ ಗಟ್ಟಿಯಾಗಿದೆ. ರಾಜ್ಯದ ಅನೇಕ ತಾಲ್ಲೂಕುಗಳಲ್ಲಿರುವ ಬರಪರಿಸ್ಥಿತಿಯ ಚರ್ಚೆಗೆ ಕಲಾಪಕ್ಕೆ ಅವಕಾಶ ನೀಡಬೇಕೆಂದು ಕೋರಿದರು. ಆದರೂ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿ ಸದನದಲ್ಲಿ ಕೋಲಾಹಲ ಸೃಷ್ಟಿಯಾಯಿತು. ಕಾಂಗ್ರೆಸ್ ಜೆಡಿಎಸ್ ಸದಸ್ಯರು ಬಿಜೆಪಿಗೆ ಧಿಕ್ಕಾರ ಕೂಗಿದರು.

ಸದನದಲ್ಲಿ ಗದ್ದಲ ಹೆಚ್ಚಾಗುತ್ತಿದ್ದಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಲಾಪವನ್ನು ಅಪರಾಹ್ನ 3 ಗಂಟೆಗೆ ಮುಂದೂಡಿದರು.

ಶಾಸಕರಲ್ಲಿ ನಿರಾಸಕ್ತಿ: ಬಜೆಟ್ ಅಧಿವೇಶನದ ಅಂಗವಾಗಿ ವಿಧಾನಸಭೆಯ ಕಲಾಪ ಎರಡನೇ ದಿನಕ್ಕೆ ಕಾಲಿಟ್ಟಿದ್ದರೂ ಬಹುತೇಕ ಶಾಸಕರಲ್ಲಿ ನಿರಾಸಕ್ತಿ ಮನೆ ಮಾಡಿದೆ. ಪರಿಣಾಮವಾಗಿ ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ಕಡಿಮೆಯಾಗಿದೆ.

ಪಕ್ಷಗಳ ಲೆಕ್ಕಾಚಾರದಲ್ಲಿ ಹೇಳುವುದಾದರೆ ಇಂದು ಬೆಳಗಿನ ಕಲಾಪದಲ್ಲಿ ಜೆಡಿಎಸ್‍ನ 21 ಶಾಸಕರು, ಕಾಂಗ್ರೆಸ್‍ ನ 52 ಶಾಸಕರು, ಬಿಜೆಪಿಯ 78 ಶಾಸಕರು ಹಾಜರಾಗಿದ್ದಾರೆ.
ಅತೃಪ್ತ ಕಾಂಗ್ರೆಸ್ ಶಾಸಕರ ಕೋಪ ಇನ್ನೂ ತಣ್ಣಗಾಗಿಲ್ಲ. ಪ್ರತಾಪ್‍ ಗೌಡ ಪಾಟಿಲ್, ರಮೇಶ್ ಜಾರಕೊಹೊಳಿ, ನಾಗೇಂದ್ರ, ಮಹೇಶ್ ಕುಮುಟಳ್ಳಿ, ಬಿ.ಸಿ.ಪಾಟಿಲ್ ಅವರುಗಳು ಸಹ ಕಲಾಪಕ್ಕೆ ಗೈರು ಹಾಜರಾಗಿರುವುದು ಎದ್ದು ಕಾಣುತ್ತಿತ್ತು.

ಇನ್ನು ಆಪರೇಷನ್ ಕಮಲದ ರೂವಾರಿ ಎಂದು ಹೇಳಲಾಗುತ್ತಿರುವ ಅರವಿಂದ ಲಿಂಬಾವಳಿ, ಬಾಲಚಂದ್ರ ಜಾರಕಿಹೊಳಿ, ಅಶ್ವಥ್ ನಾರಾಯಣ್ ಸಹ ಗೈರು ಹಾಜರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com