ಮತ್ತೆ ಕಾಂಗ್ರೆಸ್ ಗೆ ಬೆಂಬಲ ನೀಡಿದ ಪಕ್ಷೇತರ ಶಾಸಕ ಹೆಚ್ ನಾಗೇಶ್!
ರಾಜ್ಯ ಸಮ್ಮಿಶ್ರ ಸರ್ಕಾರದ ಕಾರ್ಯನಿರ್ವಹಣೆಗೆ ಬೇಸರ ವ್ಯಕ್ತಪಡಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಳೆದ ತಿಂಗಳಷ್ಟೇ ವಾಪಸ್ ಪಡೆದಿದ್ದ ಪಕ್ಷೇತರ ಶಾಸಕ ಹೆಚ್ ನಾಗೇಶ್, ಈಗ ಕಾಂಗ್ರೆಸ್
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಕಾರ್ಯನಿರ್ವಹಣೆಗೆ ಬೇಸರ ವ್ಯಕ್ತಪಡಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಳೆದ ತಿಂಗಳಷ್ಟೇ ವಾಪಸ್ ಪಡೆದಿದ್ದ ಪಕ್ಷೇತರ ಶಾಸಕ ಹೆಚ್ ನಾಗೇಶ್, ಈಗ ಕಾಂಗ್ರೆಸ್ ಗೆ ತಮ್ಮ ಬೆಂಬಲ ಘೋಷಿಸಿದ್ದಾರೆ.
ಹಳೇ ಗಂಡನ ಪಾದವೇ ಗತಿ ಎಂಬಂತೆ ಮುಳಬಾಗಿಲು ಪಕ್ಷೇತರ ಶಾಸಕ ಹೆಚ್ ನಾಗೇಶ್ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬೆಂಬಲ ಘೋಷಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ನ ಟ್ರಬಲ್ ಶೂಟರ್ ಎಂದೇ ಹೇಳಲಾಗುವ ಡಿ.ಕೆ ಶಿವಕುಮಾರ್ ಅವರು ಇದ್ದರು.
"ಉತ್ತಮ ಆಡಳಿತಕ್ಕಾಗಿ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದೆ ಆದರೆ ಈ ಸರ್ಕಾರ ಉತ್ತಮ ಆಡಳಿತ ನೀಡುತ್ತಿಲ್ಲ. ಜನರ ಆಶಯ ಈಡೇರಿಸುವಲ್ಲಿ ಸರ್ಕಾರ ವಿಫಲಗೊಂಡಿದೆ. ಸರ್ಕಾರದಿಂದ ನಮಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ನಾನು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದು ಬಿಜೆಪಿಗೆ ಬೆಂಬಲ ನೀಡುತ್ತೇನೆ" ಎಂದು ಜ.15 ರಂದು ಶಾಸಕ ನಾಗೇಶ್ ಬೆಂಬಲ ವಾಪಸ್ ಪತ್ರವನ್ನು ಪ್ರಕಟಿಸಿದ್ದರು. ಆದರೆ ಇದಾಗಿ ಒಂದು ತಿಂಗಳಾಗುವುದಕ್ಕೂ ಮುನ್ನವೇ ನಾಗೇಶ್ ಮತ್ತೆ ಕಾಂಗ್ರೆಸ್-ಜೆಡಿಎಸ್ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ.