ಇನ್ನು ವಿಧಾನಪರಿಷತ್ತಿನಲ್ಲೂ ಕೂಡ ಪರಿಸ್ಥಿತಿ ಇದಕ್ಕಿಂತ ವಿಭಿನ್ನವಾಗಿರಲಿಲ್ಲ. ಒಟ್ಟಾರೆ ಏಳು ದಿನಗಳಲ್ಲಿ 10 ಗಂಟೆ 20 ನಿಮಿಷ ಮಾತ್ರ ನಡೆದ ಕಲಾಪದಲ್ಲಿ ಜನಸಾಮಾನ್ಯರ ಸಮಸ್ಯೆಗಳ ಧ್ವನಿ ಕೇಳಿ ಬರಲಿಲ್ಲ. ಹಲವಾರು ವಿಧೇಯಕಗಳು ಕೂಡ ಯಾವುದೇ ಚರ್ಚೆ ಇಲ್ಲದೇ ಅಂಗೀಕಾರ ಪಡೆಯಿತು.
ಕಾಂಗ್ರೆಸ್ ವಿರುದ್ಧ ಬಹಿರಂಗ ಬಂಡಾಯ ಸಾರಿ ಕೊನೇ ಕ್ಷಣದವರೆಗೂ ಪಕ್ಷದ ಶಾಸಕಾಂಗ ಸಭೆ ಹಾಗೂ ಅಧಿವೇಶನಕ್ಕೆ ಗೈರು ಹಾಜರಾಗಿದ್ದ ನಾಲ್ವರು ಶಾಸಕರು ನಿನ್ನೆ ದಿನ ಹಠಾತ್ ಪ್ರತ್ಯಕ್ಷರಾಗಿ ವಿಧಾನಸಭೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡಿದ್ದ ಇಬ್ಬರು ಪಕ್ಷೇತರ ಶಾಸಕರು ಕೂಡ ನಿನ್ನೆಯಷ್ಟೇ ವಿಧಾನಸಭೆಯಲ್ಲಿ ಕಾಣಿಸಿಕೊಂಡಿದ್ದರು.
ವಿಧಾನಮಂಡಲ ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನವೇ ಸರ್ಕಾರ ಪತನವಾಗಲಿದೆ, ಬಜೆಟ್ ಮಂಡನೆ ಮಾಡುವ ಅವಕಾಶ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಿಗುವುದೇ ಇಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಹೇಳುತ್ತಾ ಬರುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಜೆಟ್ ಅಧಿವೇಶನದ ಮೇಲೆ ರಾಜಕೀಯ ಬಿಕ್ಕಟ್ಟಿನ ಕಾರ್ಮೋಡ ಆವರಿಸಿತ್ತು. ಸರ್ಕಾರ ಗಟ್ಟಿಯಾಗಿ ಉಳಿಯಲಿದೆಯೋ ಇಲ್ಲ ಕಾಂಗ್ರೆಸ್ ಶಾಸಕರ ಅಸಮಾಧಾನದ ಹಿನ್ನೆಲೆಯಲ್ಲಿ ಪತನವಾಗಲಿದೆಯೋ ಎಂಬ ಭೀತಿಯೂ ಸಾರ್ವಜನಿಕ ವಲಯದಲ್ಲಿ ಆವರಿಸಿಕೊಂಡಿತ್ತು. ಎಲ್ಲವನ್ನೂ ಮೀರಿ ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮಾಡಿದ್ದು ಅದಕ್ಕೆ ಅಂಗೀಕಾರ ಪಡೆದುಕೊಂಡಿದ್ದರು. ಒಟ್ಟಾರೆ ಬಜೆಟ್ ಅಧಿವೇಶನ ಗೌಜು, ಗದ್ದಲ, ಕೋಲಾಹಲದಲ್ಲೇ ಕಳೆದು ಹೋಯಿತು.
ಒಂದು ಫೋನ್ ಸಂಭಾಷಣೆಯ ಆಡಿಯೋ ಪ್ರಕರಣ ಇಡೀ ಅಧಿವೇಶನವನ್ನೇ ದಿಕ್ಕು ತಪ್ಪಿಸಿತು. ನಿಗದಿಯಂತೆ ನಾಳೆಗೆ ಮುಗಿಯಬೇಕಾಗಿದ್ದ ವಿಧಾನಮಂಡಲದ ಬಜೆಟ್ ಅಧಿವೇಶನ ಒಂದು ದಿನ ಮುಂಚಿತವಾಗಿಯೇ ಮುಕ್ತಾಯಗೊಂಡಿದ್ದು ವಿಪರ್ಯಾಸ.