ಬೆಂಗಳೂರು:ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಅವರ ಮನೆಗೆ ಕಾಂಗ್ರೆಸ್ನ ಘಟಾನುಘಟಿ ನಾಯಕರು ಬೆಳ್ಳಂಬೆಳಗೆ ಭೇಟಿ ನೀಡಿ, ಮನವೊಲಿಕೆಗೆ ಯತ್ನಿಸಿದ್ದಾರೆ.
ಹಲವು ಗಂಟೆಗಳು ನಿರಂತರ ಪ್ರಯತ್ನದಿಂದ ಡಿಕೆ ಶಿವಕುಮಾರ್ ಅವರು ಎಂಟಿಬಿ ನಾಗರಾಜ್ ಮನವೊಲಿಸುವಲ್ಲಿ ಬಹುತೇಕ ಯಶಸ್ವಿಯಾದಂತಿದೆ.
ರಾಜೀನಾಮೆ ಹಿಂಪಡೆಯಲು ಸಮಯಾವಕಾಶ ಕೇಳಿರುವುದಾಗಿ ಹೇಳುವ ಮೂಲಕ ಪಕ್ಷದಲ್ಲೇ ಇರುವ ಸೂಚನೆ ನೀಡಿರುವ ಎಂಟಿಬಿ ನಾಗರಾಜ್, ಸಂಧಾನದ ನಂತರ ಉಪ ಮುಖ್ಯಮಂತ್ರಿ ಪರಮೇಶ್ವರ್, ಸಚಿವ ಡಿ.ಕೆ ಶಿವಕುಮಾರ್ ಜೊತೆಗೆ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿದರು.
ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿಂದು ಭೇಟಿಯಾದ ಎಂಟಿಬಿ ನಾಗರಾಜ್, ಸಿದ್ದರಾಮಯ್ಯ ಅವರ ಮುಂದೆ ಕೆಲ ಷರತ್ತುಗಳನ್ನು ಇಟ್ಟಿದ್ದಾರೆ ಎಂಬುದು ತಿಳಿದುಬಂದಿದೆ. ಎಲ್ಲಾ ಷರತ್ತುಗಳಿಗೆ ಸಿದ್ದರಾಮಯ್ಯ ಒಪ್ಪಿದ್ದು, ಕಾಂಗ್ರೆಸ್ ನಲ್ಲಿಯೇ ಉಳಿಯುವುದಾಗಿ ಎಂಟಿಬಿ ನಾಗರಾಜ್ ಮಾತು ಕೊಟ್ಟಿದ್ದಾರೆ ಎನ್ನಲಾಗಿದೆ..
ಚರ್ಚೆ ವೇಳೆಯಲ್ಲಿ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಅವರೇ ಇದ್ದಾರೆ. ರಾಜೀನಾಮೆ ನೀಡಿರುವ ಮತ್ತೋರ್ವ ಶಾಸಕ ಡಾ. ಸುಧಾಕರ್ ಅವರು ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸುತ್ತೇನೆ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.