ಕೆಆರ್ ಪುರ ಅಭಿವೃದ್ಧಿ ಕಾಮಗಾರಿಯಲ್ಲಿ ಸರ್ಕಾರಕ್ಕೆ 100 ಕೋಟಿ ಕಿಕ್ ಬ್ಯಾಕ್: ವಿಎಸ್ ಉಗ್ರಪ್ಪ

ಕೆಆರ್ ಪುರಂ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆ ಮಾಡಿರುವ ಹಣದಲ್ಲಿ ರಾಜ್ಯ ಸರ್ಕಾರ 100 ಕೋಟಿ ರೂ. ಲಂಚ ಪಡೆದಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ವಿ.ಎಸ್.ಉಗ್ರಪ್ಪ
ವಿ.ಎಸ್.ಉಗ್ರಪ್ಪ
Updated on

ಬೆಂಗಳೂರು: ಕೆಆರ್ ಪುರಂ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆ ಮಾಡಿರುವ ಹಣದಲ್ಲಿ ರಾಜ್ಯ ಸರ್ಕಾರ 100 ಕೋಟಿ ರೂ. ಲಂಚ ಪಡೆದಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೆಂಡರ್ ಇಲ್ಲದೆ 500 ಕೋಟಿ ರೂ ಮೊತ್ತದ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ರಾಜ್ಯ ಸರ್ಕಾರ ಬಿಬಿಎಂಪಿ ಆಯುಕ್ತರಿಗೆ ಈ ಸಂಬಂಧ ಅಧಿಕಾರ ನೀಡಿದೆ. ಆದೇಶ ಮಾಡಿರುವುದೇ ಕಾನೂನು ಬಾಹಿರ. ಇದರಿಂದ 100 ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದ್ದು, ಶೇ. 15 ರಿಂದ 20 ರಷ್ಟು ಕಮೀಷನ್ ಪಡೆಯಲಾಗಿದೆ ಎಂದರು.

ಈ ಕುರಿತು ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಬೇಕು. ಇದರಲ್ಲಿ ಯಾರಿಗೆ ಎಷ್ಟು ಪಾಲು ಹೋಗಿದೆ ಎಂಬುದು ಗೊತ್ತಾಗಬೇಕು. ಮೊದಲು ಈ ಕಾಮಗಾರಿಯನ್ನು ರದ್ಧುಪಡಿಸಬೇಕು. ಬೇರೆ ಕ್ಷೇತ್ರಗಳಲ್ಲೂ ಇದೇ ರೀತಿ ಮಾಡಲಾಗುತ್ತಿದೆ. ಮತದಾರರ ಒಲೈಕೆಗಾಗಿ ಬಿಜೆಪಿ ಆಡಳಿತದಲ್ಲಿ ಭಾರೀ ಅಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಕೆಆರ್ ಪುರಂ ಅನರ್ಹ ಶಾಸಕರು ಈ ಕಾಮಗಾರಿಗಳಲ್ಲಿ ಕಮಿಷನ್ ಪಡೆಯುತ್ತಿದ್ದಾರೆ. ತಮ್ಮ ಅನುಯಾಯಿಗಳಿಗೆ, ಮುಖ್ಯಮಂತ್ರಿ ಅವರಿಗೆ ಇದರಲ್ಲಿ ಎಷ್ಟು ಪಾಲು ಹೋಗಿದೆ?. ಬಿಜೆಪಿ ನಾಯಕರಿಗೆ ಎಷ್ಟು ಪಾಲು ಹೋಗಿದೆ? ಅನರ್ಹ ಶಾಸಕರಿಗೆ ಶಾಸಕರಿಗೆ ಎಷ್ಟು ದೊರೆತಿದೆ ಎಂಬುದು ಗೊತ್ತಾಗಬೇಕು ಎಂದರು.

ಈ ಪ್ರಕರಣದ ಬಗ್ಗೆ ತಕ್ಷಣವೇ ಕಾನೂನು ತನಿಖೆ ಮಾಡಿ ಕೆಆರ್.ಐಡಿಎಲ್ ಗೆ ನೀಡಿರುವ ಗುತ್ರಿಗೆ ವಾಪಸ್ ಪಡೆಯಬೇಕು. ಯಡಿಯೂರಪ್ಪ ಸರ್ಕಾರ ದೋಚುವ, ಲೂಟಿಕೋರರ ಸರ್ಕಾರವಾಗಿದೆ. ಕೆಆರ್.ಐಡಿಎಲ್ ಗೆ ಕೊಟ್ಟಿರುವ ಆದೇಶ ತಡೆ ಹಿಡಿಯಬೇಕು. ಚುನಾವಣೆಯಲ್ಲಿ ತಾವೇ ಸ್ಪರ್ಧಿಸಲಿದ್ದು, ತಮಗೆ ಶೇ.25 ರಷ್ಟು ಕಮೀಶನ್ ತಂದುಕೊಡಿ ಎಂದು ಅನರ್ಹ ಶಾಸಕರು ಮಾತುಕತೆ ಕುದುರಿಸಿದ್ದಾರೆ. ಬಿಜೆಪಿ ಅಂದರೆ ಭ್ರಷ್ಟ ಜನರಿಂದ ಕೂಡಿರುವ ಸರ್ಕಾರವಾಗಿದೆ ಎಂದು ಆರೋಪಿಸಿದರು.

ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮಗಳು ನಡೆಯುತ್ತಿದೆ. ನವ ನಗರೋತ್ತಾನ ಯೋಜನೆ ಅಡಿಯಲ್ಲಿ ಟೆಂಡರ್ ಇಲ್ಲದೇ ಕೋಟ್ಯಾಂತರ ರೂಪಾಯಿ ಕಾಮಗಾರಿ ನಡೆದಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭೈರತಿ ಬಸವರಾಜ್ ಕ್ಷೇತ್ರಕ್ಕೆ 300 ಕೋಟಿ ರೂಪಾಯಿ ಧಿಡೀರ್ ಅನುದಾನ ನೀಡಲಾಗಿದೆ. ಅನುದಾನವನ್ನ ಎರಡು ಕೋಟಿ ಮೀರದಂತೆ ತುಂಡು ಗುತ್ತಿಗೆಗೆ ವಹಿಸಲಾಗುತ್ತಿದೆ. ಸರ್ಕಾರ ಕೆ ಆರ್ ಐ ಡಿ ಎಲ್ ಮೂಲಕ ಕಾಮಗಾರಿಗೆ ಮುಂದಾಗಿದೆ. 300 ಕೋಟಿ ಬೃಹತ್ ಮೊತ್ತಕ್ಕೆ ಟೆಂಡರ್ ಇಲ್ಲದೇ ಎರಡು ಕೋಟಿ ಮೀರದಂತೆ ತುಂಡು ಗುತ್ತಿಗೆ ನೀಡಲಾಗುತ್ತಿದೆ. ಅನರ್ಹ ಶಾಸಕ ಭೈರತಿ ಬಸವರಾಜ್ ಆಪ್ತರಿಗೆ ಗುತ್ತಿಗೆ ನೀಡಲಾಗಿದೆ ಎಂದು ಆಪಾದಿಸಿದರು. 

ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಬೆಂಗಳೂರಿನ 28 ಕ್ಷೇತ್ರಗಳಿಗೆ ಸರ್ಕಾರದ ಅನುದಾನ ಬಿಡುಗಡೆ ಮಾಡಿದೆ. 8015 ಕೋಟಿ ಕ್ರಿಯಾ ಯೋಜನೆಗೆ ಅನುಮತಿ ನೀಡಿದೆ. ಇದರಲ್ಲಿ ಕೆ.ಆರ್.ಪುರಂಗೆ 200 ಕೋಟಿ ಒದಗಿಸಲಾಗಿದೆ. ಟೆಂಡರ್ ಇಲ್ಲದೆ ನೂರಾರು ಕಾಮಗಾರಿಗೆ ಅವಕಾಶ ಮಾಡಿಕೊಡಲಾಗಿದೆ. ಪ್ರತಿಕಾಮಗಾರಿಗೆ 2 ಕೋಟಿ ನಿಗದಿಪಡಿಸಲಾಗಿದ್ದು, ಒಟ್ಟು 500 ಕೋಟಿ  ರೂ ಮೊತ್ತದ ಕಾಮಗಾರಿಗೆ ಅವಕಾಶ ನೀಡಲಾಗಿದೆ. ಟೆಂಡರ್ ಇಲ್ಲದೆ ಕಾಮಗಾರಿ ವಹಿಸಲು ಅವಕಾಶವಿಲ್ಲ. ಆದರೂ ಅನುಮತಿ ಹೇಗೆ ನೀಡಲಾಗಿದೆ ಎಂಬುದು ಅಚ್ಚರಿಗೆ ಕಾರಣವಾಗಿದೆ. ಇದು ನಿಯಮಬಾಹಿರವಾಗಿದ್ದು, ಸರ್ಕಾರ ಕಾನೂನು ಬಾಹಿರ ಕೆಲಸಗಳನ್ನು ಮಾಡುತ್ತಿದೆ. ಈ ಎಲ್ಲಾ ಅಕ್ರಮಗಳ ವಿರುದ್ದ ತನಿಖೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com