ಬೀದರ್: ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದಲ್ಲಿನ ಪ್ರಸ್ತುತ ಬೆಳವಣಿಗೆಯನ್ನು ಚರ್ಚಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನು ಹೈಕಮಾಂಡ್ ದೆಹಲಿಗೆ ಕರೆದಿದೆ. ಈ ಮುಖೇನ ಖಂಡ್ರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆದ್ಯತೆಯ ಆಯ್ಕೆಯಾಗಿರಬಹುದು ಎಂಬಂತೆ ಕಾಣಿಸುತ್ತಿದೆ. ಇನ್ನು ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಖಂಡ್ರೆ ಅವರ ಬೆಂಬಲಕ್ಕಿದ್ದಾರೆ ಎಂದೂ ಹೇಳಲಾಗಿದೆ..
ಪತ್ರಿಕೆಯೊಡನೆ ಮಾತನಾಡಿದ ಖಂಡ್ರೆ ತಮಗೆ ಹೈಕಮಾಂಡ್ ಬುಲಾವ್ ನೀಡಿರುವುದನ್ನು ಖಚಿತಪಡಿಸಿದ್ದಾರೆ. ತಾವು ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳುವುದಾಗಿ ಅವರು ಹೇಳಿದ್ದಾರೆ. "ಹೈಕಮಾಂಡ್ ಭೇಟಿಯಾಗಲು ನಾನು ಶುಕ್ರವಾರ ಬೆಳಿಗ್ಗೆ ಅಥವಾ ಮಧ್ಯಾಹ್ನದ ವೇಳೆಗೆ ದೆಹಲಿಯಲ್ಲಿರುತ್ತೇನೆ" ಎಂದು ಅವರು ಹೇಳಿದರು.
ಖಂಡ್ರೆ ಉತ್ತರ ಕರ್ನಾಟಕದಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮುದಾಯದವರು. ಮತ್ತು ಅವರ ರಾಜಕೀಯ ಜೀವನದುದ್ದಕ್ಕೂ ಯಾವುದೇ ವಿವಾದಗಳಿಲ್ಲದೆ ಇದ್ದವರು. ಇದೇ ಕಾರಣಕ್ಕೀಗ ಅವರು ತಮಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡಿದರೆ ನಿಭಾಯಿಸಲು ಸಿದ್ದವಾಗಿದ್ದೇನೆ ಎಂದಿದ್ದಾರೆ. ”ಪ್ರಸ್ತುತ, ಎಲ್ಲಾ ರಾಜೀನಾಮೆಗಳನ್ನು ಇನ್ನೂ ಅಂಗೀಕರಿಸಲಾಗಿಲ್ಲ, ಒಂದೊಮ್ಮೆ ಅಂಗೀಕರಿಸಿದರೆ ಆ ನಂತರ , ಹೊಸ ಅಧ್ಯಕ್ಷರನ್ನು ನೇಮಿಸಲಾಗುವುದು. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ನಾನು ಹಲವಾರು ವರ್ಷಗಳಿಂದ ಕಾಂಗ್ರೆಸ್ ಪರ ವಿವಿಧ ಜವಾಬ್ದಾರಿಯುತ ಕೆಲಸ ಮಾಡುತ್ತಿದ್ದೇನೆ"
ಇನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಗಾಗಿ ಡಿ ಕೆ ಶಿವಕುಮಾರ್ ಕೂಡ ಸ್ಪರ್ಧೆಯಲ್ಲಿದ್ದಾರೆ, ಮತ್ತು ಈ ಹುದ್ದೆಗೆ ಲಾಬಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಆದರೆ, ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ಅವರು ಅದನ್ನು ನಿರಾಕರಿಸಿದ್ದಾರೆ.
Advertisement