ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಬಿಜೆಪಿ ಸದಸ್ಯರು ಅಡ್ಡಿಪಡಿಸಿದ ಪರಿಣಾಮ ವಜೂಭಾಯಿ ವಾಲಾ ಅವರು ಭಾಷಣ ಮೊಟಕುಗೊಳಿಸಿದ ಪ್ರಸಂಗ ವಿಧಾನಸಭೆಯಲ್ಲಿಂದು ಜರುಗಿತು.
ರಾಜ್ಯಪಾಲರು ಭಾಷಣ ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಧರಣಿ ನಡೆಸಿ ಗದ್ದಲ ಎಬ್ಬಿಸಿದರು. ಬಿಜೆಪಿ ಸದಸ್ಯರು ರಾಜ್ಯದ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದ್ದು, ರಾಜ್ಯಪಾಲರ ಮೂಲಕ ಸುಳ್ಳು ಭಾಷಣ ಮಾಡಿಸುತ್ತಿದೆ ಎಂದು ಪ್ರತಿಭಟನೆ ನಡೆಸಿದರು. ಬಿಜೆಪಿ ಸದಸ್ಯರ ಗದ್ದಲದ ನಡುವೆಯೇ ಎರಡು ಪುಟಗಳನ್ನು ರಾಜ್ಯಪಾಲರು ಓದಿದರು. ನಂತರ ಗದ್ದಲ ತೀವ್ರಗೊಂಡ ಪರಿಣಾಮ ತಮ್ಮ ಪೂರ್ಣ ಭಾಷಣದ ಪ್ರತಿಯನ್ನು ಸದನದಲ್ಲಿ ಮಂಡಿಸುತ್ತಿರುವುದಾಗಿ ಹೇಳಿ ಭಾಷಣ ಮೊಟಕುಗೊಳಿಸಿದರು.
22 ಪುಟಗಳ ಪೈಕಿ 2 ಪುಟಗಳನ್ನು ಓದಿ ರಾಜ್ಯಪಾಲರು ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟುಕುಗೊಳಿಸಿ ವಿಧಾನಸಭೆಯಿಂದ ಹೊರ ನಡೆದರು.
ಇದಕ್ಕೂ ಮುನ್ನ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣಮಾಡಲು ಆಗಮಿಸಿದ ರಾಜ್ಯಪಾಲ ವಜೂಭಾಯಿ ವಾಲ ಅವರನ್ನು ಸಭಾಧ್ಯಕ್ಷ ರಮೇಶ್ಕುಮಾರ್ ಹಾಗೂ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆದರದಿಂದ ಬರಮಾಡಿಕೊಂಡರು. ಸರ್ಕಾರಿ ಗೌರವಗಳೊಂದಿಗೆ ರತ್ನಗಂಬಳಿ ಮೇಲೆ ರಾಜ್ಯಪಾಲರನ್ನು ಸ್ವಾಗತಿಸಿ ವಿಧಾನಸಭೆಗೆ ಕರೆದೊಯ್ಯಲಾಯಿತು.
ಬಳಿಕ ರಾಷ್ಟ್ರಗೀತೆ ಬಳಿಕ ರಾಜ್ಯಪಾಲರು ಭಾಷಣ ಓದಲು ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರಿಂದ ಅಡ್ಡಿ ವ್ಯಕ್ತವಾಯಿತು. ಭಾಷಣ ಮೊಟಕುಗೊಳಿಸಿದ ರಾಜ್ಯಪಾಲರನ್ನು ಸರ್ಕಾರಿ ಗೌರವಗಳೊಂದಿಗೆ ಬೀಳ್ಕೊಡಲಾಯಿತು.
ಇತಿಹಾಸದ ಕಪ್ಪು ಚುಕ್ಕಿ: ಹೊರಟ್ಟಿ
ವಿಧಾನಮಂಡಲದ ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಮಾಡಿದ ಬಿಜೆಪಿ ವರ್ತನೆ ಇತಿಹಾಸದಲ್ಲಿ ಕಪ್ಪು ಚುಕ್ಕಿಯಾಗಿದೆ ಎಂದು ಮಾಜಿ ಸಭಾಪತಿ ಹಾಗೂ ಜೆಡಿಎಸ್ ನ ಮೇಲ್ಮನೆಯ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.