ಮೈಸೂರು: ಟಿಪ್ಪು ಸುಲ್ತಾನ್ ಮೈಸೂರಿನ ಹುಲಿ. ಟಿಪ್ಪು ಏನು ಎಂಬುದು ಶ್ರೀರಂಗಪಟ್ಟಣ, ಶೃಂಗೇರಿ ಹಾಗೂ ದೇವನಹಳ್ಳಿಯಲ್ಲಿ ಕಾಣಿಸುತ್ತದೆ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ರಾಜ್ಯ ಸರ್ಕಾರದ ನಡೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಐತಿಹಾಸಿಕ ವ್ಯಕ್ತಿ. ಅವರ ಬಗ್ಗೆ ಈಗ ರಾಜಕೀಯವಾಗಿ ವಿಶ್ಲೇಷಣೆ ಮಾಡುವುದು ತಪ್ಪು. ಇತಿಹಾಸ ಎಂದ ಮೇಲೆ ನಾಯಕರೂ ಇರುತ್ತಾರೆ, ಖಳನಾಯಕರೂ ಇದ್ದೇ ಇರುತ್ತಾರೆ ಎಂದರು.
ಟಿಪ್ಪು ಇತಿಹಾಸ ಬೇರೆ, ಮೈಸೂರು ಮಹಾರಾಜರ ಇತಿಹಾಸವೇ ಬೇರೆ. ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸ ತೆಗೆದು ಹಾಕಿದರೆ ಇತಿಹಾಸ ಸಾಯುವುದಿಲ್ಲ ಎನ್ನುವ ಮೂಲಕ, ಟಿಪ್ಪು ಸುಲ್ತಾನ್ ವಿಚಾರವನ್ನು ಪಠ್ಯದಿಂದ ತೆಗೆದು ಹಾಕಿದರೂ ಟಿಪ್ಪು ಇತಿಹಾಸ ಅಳಿಸಲಾಗದು ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಟಿಪ್ಪುವಿನ ಬಗ್ಗೆ ಹಲವು ಮಂದಿ ಪುಸ್ತಕ ಬರೆದಿದ್ದಾರೆ. ಬೇಕಾದಷ್ಟು ಪುಸ್ತಕಗಳು ಲಭ್ಯವಿದೆ. ಹೀಗಾಗಿ ರಾಜ್ಯ ಸರ್ಕಾರ ಪಠ್ಯ ಪುಸ್ತಕದಿಂದ ಇತಿಹಾಸ ತೆಗೆಯುವುದು ಸರಿಯಲ್ಲ. ಟಿಪ್ಪುವಿಗೂ ಉಪಚುನಾವಣೆಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ ಎಂದರು.
Advertisement