ಹಾವೇರಿ: ಬಿ.ಸಿ ಪಾಟೀಲ್ ಮತ್ತು ಯು.ಬಿ ಬಣಕಾರ್ ಒಂದಾದ ಬಳಿಕ ಹಿರೇಕೆರೂರು ಕ್ಷೇತ್ರಕ್ಕೆ ನಾನು ಬರುವ ಅಗತ್ಯವೇ ಇಲ್ಲ. ಉಪ ಚುನಾವಣೆ ಪ್ರಚಾರಕ್ಕೆ ಇವರಿಬ್ಬರೇ ಜೋಡತ್ತು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಾಡಿ ಹೊಗಳಿದ್ದಾರೆ.
ಇಂದು ಜಿಲ್ಲೆಯಲ್ಲಿ ನಡೆದ ಕೃತಜ್ಞತಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಬಿ.ಸಿ ಪಾಟೀಲ್ ಮತ್ತು ಯು.ಬಿ ಬಣಕಾರ್ ಒಟ್ಟಾಗಿದ್ದರೆ ಇವರ ಮುಂದೆ ಯಾವುದೇ ಶಕ್ತಿ ಕೆಲಸ ಮಾಡಲು ಸಾಧ್ಯವಿಲ್ಲ. ಬೇರೆ ಯಾವುದೇ ಪಕ್ಷ ಇಲ್ಲಿ ತಲೆ ಎತ್ತುವುದಕ್ಕೆ ಬಿಡುವುದಿಲ್ಲ ಎಂದು ಎಲ್ಲರೂ ಕೈ ಎತ್ತಿ ಹೇಳಿ ಎಂದರು.
ಯು.ಬಿ. ಬಣಕಾರ್ ಯಾವುದೇ ಕಾರಣಕ್ಕೂ ತಲೆಬಗ್ಗಿಸದಂತೆ ನೋಡಿಕೊಳ್ಳುವ ಮೂಲಕ ಗೌರವದಿಂದ ನಡೆಸಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಉಪಚುನಾವಣೆಯಲ್ಲಿ ಬಿ.ಸಿ. ಪಾಟೀಲ್ ಅವರಿಗೆ ಟಿಕೆಟ್ ಕೊಡುವುದಾಗಿ ಸಿಎಂ ಪರೋಕ್ಷವಾಗಿ ತಿಳಿಸಿದರು.
ಶಿಕಾರಿಪುರ ಸೇರಿ ಹಾವೇರಿ ಜಿಲ್ಲೆಗೆ ಒಟ್ಟು 2,829 ಕೋಟಿ ರೂ. ಅನುದಾನ ಒದಗಿಸಿದ್ದೇನೆ. ಇನ್ನು ಮೂರು ದಿನಗಳಲ್ಲಿ ಹಾವೇರಿ ಜಿಲ್ಲೆಗೆ ಇನ್ನೂ ನೂರು ಕೋಟಿ ರೂ. ಅನುದಾನ ನೀಡಲಿದ್ದೇನೆ ಎಂದರು.
Advertisement