ದೇವೇಗೌಡರ ಬೀಗರ ಮನೆಯಲ್ಲಿ ಸಿದ್ದು ಉಪಹಾರ!

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಬೀಗರು ಹಾಗೂ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತಿ ಕುಲಪತಿ ಪ್ರೊಫೆಸರ್ ಕೆ. ಎಸ್. ರಂಗಪ್ಪ ಅವರ ಮನೆಯಲ್ಲಿ ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಉಪಹಾರ ಸೇವಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ, ಪ್ರೊ.ರಂಗಪ್ಪ
ಸಿದ್ದರಾಮಯ್ಯ, ಪ್ರೊ.ರಂಗಪ್ಪ

ಮೈಸೂರು:ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಬೀಗರು ಹಾಗೂ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತಿ ಕುಲಪತಿ ಪ್ರೊಫೆಸರ್ ಕೆ. ಎಸ್. ರಂಗಪ್ಪ ಅವರ ಮನೆಯಲ್ಲಿ ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಉಪಹಾರ ಸೇವಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪ್ರೊಫೆಸರ್ ರಂಗಪ್ಪ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.ನಂತರ ಜೆಡಿಎಸ್ ಪಕ್ಷದೊಂದಿಗೆ ಅಷ್ಟಾಗಿ ಗುರುತಿಸಿಕೊಳ್ಳದ ರಂಗಪ್ಪ ಅವರ ಮನೆಗೆ ಇಂದು ಇದ್ದಕ್ಕಿದ್ದಂತೆ ಭೇಟಿ ನೀಡಿದ ಸಿದ್ದರಾಮಯ್ಯ,ಉಪಹಾರ ಸೇವಿಸಿದ್ದು, ಸ್ವಲ್ಪ ಹೊತ್ತು ಮಾತುಕತೆ ನಡೆಸಿದ್ದಾರೆ. ಆದರೆ,ಮಾತುಕತೆಯ ವಿವರ ತಿಳಿದುಬಂದಿಲ್ಲ.

ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೊಫೆಸರ್ ಕೆ. ರಂಗಪ್ಪ, ಸೌಹಾರ್ದಯುತ ಸಂಬಂಧದಿಂದಾಗಿ ಸಿದ್ದರಾಮಯ್ಯ ಮನೆಗೆ ಬಂದಿದ್ದು, ಇಲ್ಲಿ ಯಾವುದೇ ರಾಜಕೀಯಕ್ಕೆ ಸಂಬಂಧಿಸಿದ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಇದೇ ವೇಳೆ ಜೆಡಿಎಸ್ ಪಕ್ಷ ತಮ್ಮನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂಬ ಅಸಮಾಧಾನವನ್ನು ಹೊರಹಾಕಿದ್ದಾರೆ.

ಈ ಮಧ್ಯೆ ಕೆಆರ್ ನಗರದ ಶಾಸಕ ಸಾರಾ ಮಹೇಶ್ ಕೂಡಾ ಚಾಮರಾಜ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ , ಸಿದ್ದರಾಮಯ್ಯ , ರಂಗಪ್ಪ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದಿಂದ ರಂಗಪ್ಪ ಅವರನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆಯೇ ಎಂಬಂತಹ ಕುತೂಹಲವೂ ಮನೆಮಾಡಿದೆ. ಒಟ್ಟಾರೇ, ಸದ್ಯಕಂತೂ ಯಾವುದೇ ವಿಷಯ ಸ್ಪಷ್ಟವಾಗಿ ತಿಳಿದುಬಂದಿಲ್ಲ, ಮುಂದಿನ ದಿನಗಳಲ್ಲಿ ಇವೆಲ್ಲವೂ ಗೊತ್ತಾಗಲಿದೆ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com