ಬೆಂಗಳೂರು: ಕೊರೊನಾ ವೈರಸ್ ಇಡೀ ಜಗತ್ತಿನಲ್ಲಿಯೆ ಆತಂಕ ಸೃಷ್ಟಿಸಿದೆ. ಜನರ ಜೀವಕ್ಕೆ ಕುತ್ತು ತಂದಿರುವ ಈ ಸಂದರ್ಭದಲ್ಲಿ ಲಾಕ್ಡೌನ್ ಘೋಷಣೆ ಮಾಡಿರುವ ಸರ್ಕಾರ ಜನರಿಗೆ ಮನೆಯಲ್ಲಿರುವಂತೆ ಸೂಚಿಸಿದೆ. ಇಡೀ ಜಗತ್ತು ಕೊರೊನಾ ವೈರಸ್ ಎದುರು ಒಗ್ಗಟ್ಟಾಗಿ ಹೋರಾಟ ನಡೆಸುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಪ್ರತಿಷ್ಠೆಗಾಗಿ ಸಚಿವರಿಬ್ಬರು ಕಿತ್ತಾಡಿಕೊಂಡಿದ್ದಾರೆ.
ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ತೋಟಗಾರಿಕಾ ಸಚಿವ ಕೆ.ಸಿ. ನಾರಾಯಣಗೌಡ ಒಬ್ಬರ ಮೇಲೊಬ್ಬರು ವಾಗ್ದಾಳಿ ನಡೆಸಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ ಉತ್ಪನ್ನಗಳ ಸುಗಮ ಸಾಗಾಟ ಸಂಬಂಧ ನಡೆಯುತ್ತಿರುವ ಸಭೆಯಲ್ಲಿ ಹೋಗೋ, ಬಾರೋ ಎಂದು ಏಕವಚದಲ್ಲಿ ಸಚಿವರು ಜಗಳವಾಡಿದ್ದಾರೆ. ಆ ಬಳಿಕ ಇಬ್ಬರನ್ನು ಸಮಾಧಾನಪಡಿಸುವಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಹೈರಾಣರಾಗಿದ್ದು, ಸಚಿವರ ನಡುವೆ ಕಿತ್ತಾಟ ಜೋರಾಗುತ್ತಿದ್ದಂತೆ ಸಭಾಂಗಣದ ಬಾಗಿಲನ್ನು ಸಿಬ್ಬಂದಿ ಮುಚ್ಚಿದ್ದಾರೆ.
ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಘಟನೆ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಅಶ್ವಥ್ ನಾರಾಯಣ್ ಅವರು, ಇಂದಿನ ಸಭೆಯಲ್ಲಿ ಅಂತದ್ದು ಏನು ಆಗಿಲ್ಲ. ಸಣ್ಣ ಪುಟ್ಟ ಸಮಸ್ಯೆಗಳು ಎಲ್ಲರಲ್ಲೂ ಇರತ್ತೆ ಬಿಡಿ ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಹಕಾರ ಸಚಿವ ಸೋಮಶೇಖರ್ ಅವರು, ಇದೆಲ್ಲಾ ಸಣ್ಣ ಪುಟ್ಟ ಆಂತರಿಕ ವಿಚಾರವಷ್ಟೇ. ಇಲಾಖೆಯಲ್ಲಿ ಆಂತರಿಕ ವಿಷಯಗಳಲ್ಲಿ ಅಸಮಾಧಾನ ಇದೆ. ಹೀಗಾಗಿ ಸಭೆಯಲ್ಲಿ ಇಬ್ಬರ ನಡುವಿನ ಮಾತಿನ ವಾಗ್ವಾದ ಆಗಿತ್ತು. ಅದೆನೂ ದೊಡ್ಡ ವಿಷಯವಲ್ಲ ಬಿಡಿ ಎಂದು ಸಚಿವ ನಾರಾಯಣಗೌಡ ಅವರೊಂದಿಗಿನ ಅಸಮಾಧಾನವನ್ನು ಸೋಮಶೇಖರ್ ಒಪ್ಪಿಕೊಂಡರು.
Advertisement