ಬೆಂಗಳೂರು: ಚುನಾವಣೆಗೆ ಮೊದಲೇ ಗ್ರಾಮ ಪಂಚಾಯತ್ ಚುನಾವಣೆ ಸೀಟುಗಳು ಹರಾಜಾಗಿವೆ. ಆದರೆ ಇಂತಹ ಅಭ್ಯರ್ಥಿಗಳನ್ನು ಪಂಚಾಯತ್ ಸರಹದ್ದಿನಿಂದ ಗಡೀಪಾರು ಮಾಡಿ ಚುನಾವಣೆ ಮುಗಿದ ನಂತರ ಅನರ್ಹಗೊಳಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
ಪ್ರತಿ ಜಿಲ್ಲೆಯಲ್ಲಿ ಇಂತಹ ಒಂದು ಅಥವಾ ಎರಡು ಘಟನೆಗಳು ನಡೆಯುತ್ತವೆ. ಈ ಹರಾಜು ಅಕ್ರಮದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇವೆ. ಅಗತ್ಯಬಿದ್ದರೆ ಪೊಲೀಸ್ ನೆರವು ನೀಡಬೇಕೆಂದು ರಾಜ್ಯದ ಡಿಜಿ ಮತ್ತು ಐಜಿಪಿಯವರಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ರಾಜ್ಯ ಚುನಾವಣಾ ಆಯುಕ್ತ ಬಿ ಬಸವರಾಜು ತಿಳಿಸಿದರು.
ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಹರಾಜು ನಡೆಯುತ್ತಿರುವುದು ಇದೇ ಮೊದಲಲ್ಲ. ಆದರೆ ಇದೇ ಮೊದಲ ಸಲ ಇಂತಹ ಘಟನೆ ವೈರಲ್ ಆಗಿದೆ. ಕಳೆದ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಹಳ್ಳಿಗಳಲ್ಲಿ ಸೋಷಿಯಲ್ ಮೀಡಿಯಾಗಳು, ಸ್ಮಾರ್ಟ್ ಫೋನ್ ಗಳನ್ನು ಅಷ್ಟೊಂದು ಉಪಯೋಗಿಸುತ್ತಿರಲಿಲ್ಲ, ಹೀಗಾಗಿ ಗೊತ್ತಾಗುತ್ತಿರಲಿಲ್ಲ ಎಂದು ಚುನಾವಣಾ ಆಯುಕ್ತರು ತಿಳಿಸಿದರು.
ಆದರೆ ಇಂದು ಸ್ಮಾರ್ಟ್ ಫೋನ್ ಗಳು ಹಳ್ಳಿಗರಲ್ಲಿ ಕೂಡ ಇದ್ದು, ಹಳ್ಳಿಗರು ಕೂಡ ಸೋಷಿಯಲ್ ಮೀಡಿಯಾ ಬಳಸುತ್ತಾರೆ. ಹೀಗಾಗಿ ಹೀಗೆ ಅಕ್ರಮ ನಡೆಯುವಾಗ ಮೊಬೈಲ್ ಗಳಲ್ಲಿ ವಿಡಿಯೊ ಮಾಡಿಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಹಾಕುತ್ತಾರೆ. ಇದು ನಮಗೆ ಸಾಕ್ಷಿಯಾಗುತ್ತದೆ, ಈ ಮೂಲಕ ಹಲವು ಕೇಸುಗಳನ್ನು ದಾಖಲಿಸುತ್ತೇವೆ ಎಂದು ಹೇಳುತ್ತಾರೆ. ಹಣ ಕೊಟ್ಟು ಅವಿರೋಧವಾಗಿ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಅನರ್ಹಗೊಳಿಸಲು ಆಯೋಗ ಪ್ರಸ್ತಾಪ ಮಾಡಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಕಾಯ್ದೆ ಹಾಗೂ ಜನ ಪ್ರಾತಿನಿಧ್ಯ ಕಾಯ್ದೆ ಮೂಲಕ ಕಾನೂನು ಉಲ್ಲಂಘನೆ ಮಾಡುವವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಹೇಳಿದರು.
ಗ್ರಾಮಸ್ಥರು ಅಂತಹ ಹರಾಜಿಗೆ ಸಾಕ್ಷಿಯಾದರೆ, ಅವರು ತಮ್ಮ ಪಂಚಾಯತ್ನ ರಿಟರ್ನಿಂಗ್ ಆಫೀಸರ್ ಅಥವಾ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಬೇಕು. ರಾಜ್ಯದಲ್ಲಿ ಇಲ್ಲಿಯವರೆಗೆ ಕನಿಷ್ಠ 25 ಘಟನೆಗಳು ವರದಿಯಾಗಿವೆ.ಅವುಗಳಲ್ಲಿ ಹೆಚ್ಚಿನವು ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಕಲಬುರ್ಗಿ, ಬೀದರ್, ಮಂಡ್ಯ, ಬಳ್ಳಾರಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಾಗಿವೆ ಎಂದರು.
ಹಳ್ಳಿಗರು ಸ್ವತಃ ಹರಾಜಿಗೆ ಒಂದು ಮೊತ್ತವನ್ನು ನಿಗದಿಪಡಿಸುತ್ತಾರೆ, ಸಾಮಾನ್ಯ ವರ್ಗ, ಎಸ್ಸಿ / ಎಸ್ಟಿ ಮತ್ತು ಮಹಿಳಾ ಅಭ್ಯರ್ಥಿಗಳ ಸ್ಥಾನಗಳಿಗೆ ಬದಲಾಗುತ್ತದೆ. ಇದು 50,000 ರೂ.ಗಳಿಂದ ಪ್ರಾರಂಭವಾಗಿ 1 ಕೋಟಿ ರೂವರೆಗೆ ಹೋಗುತ್ತದೆ. ಅಭ್ಯರ್ಥಿಗಳು ಮತ್ತು ಗ್ರಾಮಸ್ಥರ ನಡುವಿನ ಒಡಂಬಡಿಕೆ, ಬೆದರಿಕೆ, ಆಮಿಷಗಳಿಂದಾಗಿ ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡುವುದಿಲ್ಲ ಎಂದು ಆಯೋಗ ಅಧಿಕಾರಿಗಳು ಹೇಳುತ್ತಾರೆ.
ಗ್ರಾಮಸ್ಥರು, ದೇವಸ್ಥಾನಗಳು, ಶಾಲೆಗಳು, ಕುಡಿಯುವ ನೀರಿನ ಅಭಿವೃದ್ಧಿಗೆ ಬಿಡುಗಡೆಯಾದ ಹಣವನ್ನು ಈ ರೀತಿ ದುರುಪಯೋಗ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ರಾಜ್ಯ ಚುನಾವಣಾ ಆಯುಕ್ತ ಅಧಿಕಾರಿ.
ರಾಜ್ಯದ 5 ಸಾವಿರದ 762 ಗ್ರಾಮ ಪಂಚಾಯತ್ ಗಳಿಗೆ ಎರಡು ಹಂತಗಳಲ್ಲಿ ಡಿಸೆಂಬರ್ 22 ಮತ್ತು ಡಿಸೆಂಬರ್ 27ರಂದು ಚುನಾವಣೆ ನಡೆಯಲಿದ್ದು 2.96 ಕೋಟಿ ಜನರು 92.121 ಅಭ್ಯರ್ಥಿಗಳ ಆಯ್ಕೆಗೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಕನಿಷ್ಠ 4 ಲಕ್ಷ ಮತದಾರರು ಈ ಬಾರಿ ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.
Advertisement