ವಿಜಯಪುರ: ಪಾಕಿಸ್ತಾನದ ಪರ ಇರುವ ದೇಶದ್ರೋಹಿಗಳನ್ನು ಮಟ್ಟ ಹಾಕಲು ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ರಾಜ್ಯ ಗೃಹ ಸಚಿವರನ್ನಾಗಿ ನೇಮಕ ಮಾಡುವಂತೆ ಯತ್ನಾಳ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಗುರುವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಸಮಾವೇಶದ ವೇಳೆ ಅಮೂಲ್ಯ ಎಂಬ ಯುವತಿ ಪಾಕಿಸ್ತಾನದ ಪರ ಘೋಷಣೆ ಹಾಕಿ ವಿವಾದ ಸೃಷ್ಟಿಸಿದರು.
ಅಮೂಲ್ಯ ವಿರುದ್ಧದ ಪ್ರತಿಭಟನೆ ವೇಳೆ ಅರುದ್ರ ಎಂಬ ಯುವತಿ ಕೂಡ ಫ್ರೀ ಪಾಕಿಸ್ತಾನ, ದಲಿತರಿಗೆ ಮುಕ್ತ ಮಾಡಿ ಎಂಬ ಪ್ಲೇಕಾರ್ಡ ಹಿಡಿದು ಗೊಂದಲ ಸೃಷ್ಟಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಯತ್ನಾಳ್ ಬೆಂಬಲಿಗರು ಹೊಸ ವರಸೆ ಆರಂಭಿಸಿದ್ದಾರೆ.
ಟಿಕ್ಟಾಕ್, ಫೇಸ್ ಬುಕ್ನಂತಹ ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನ ಶುರುವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಯತ್ನಾಳರನ್ನು ಗೃಹ ಸಚಿವರನ್ನಾಗಿ ಮಾಡುವಂತೆ ಪೋಸ್ಟ್ ಗಳು ಹರಿದಾಡುತ್ತಿವೆ. ವಾಟ್ಸಪ್ ಗಳಲ್ಲಿ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ದೇಶದ್ರೋಹಿಗಳನ್ನು ಹುಟ್ಟಡಗಿಸಲು ಯತ್ನಾಳ್ ಅವರೇ ಸರಿ ಅವರಿಗೆ ಗೃಹ ಖಾತೆ ನೀಡಿ ಎಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಮನವಿ ಮಾಡಲಾಗಿದೆ.
Advertisement