ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸುತ್ತಿರುವ 13 ರಾಜ್ಯ ಸರ್ಕಾರಗಳನ್ನು ತಿರಸ್ಕರಿಸುತ್ತೀರಾ ಎಂದು ಕೇಂದ್ರ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಬಿಹಾರ ರಾಜ್ಯದಲ್ಲಿ ಜೆಡಿಯು ಜೊತೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಆಡಳಿತ ನಡೆಸುತ್ತಿದೆ. ಅಲ್ಲಿಯೂ ಕಾಯ್ದೆ ಕುರಿತು ವಿರೋಧ ವ್ಯಕ್ತವಾಗುತ್ತಿದೆ. ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜೆಡಿಯುಗೆ ನೀಡಿರುವ ಬೆಂಬಲವನ್ನು ಹಿಂಪಡೆಯುತ್ತೀರಾ? ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿಯೇ ಸಿಎಎ, ಎನ್ಆರ್'ಸಿ ಜಾರಿಗೆ ತರಲು ನಿಮಗೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಆಡಳಿತದಲ್ಲಿರದ ರಾಜ್ಯಗಳಲ್ಲಿ ಹೇಗೆ ಜಾರಿಗೆ ತರುತ್ತೀರಿ? ಈಗಾಗಲೇ 13 ರಾಜ್ಯಗಳು ಕಾಯ್ದೆಗೆ ವಿರೋಧ ವ್ಯಕ್ತಪಡಿಸಿವೆ ಎಂದು ಹೇಳಿದ್ದಾರೆ.
ಪೌರತ್ವ ಕಾಯ್ದೆ ಜಾರಿಗೆ ತರುವುದು ಸಾಂವಿಧಾನಿಕವಲ್ಲ ಎಂದು ಆಯಾ ರಾಜ್ಯಗಳ ರಾಜ್ಯಪಾಲರು ಸೂಚನೆಗಳನ್ನು ನೀಡಿದ್ದಾರೆ. ಸರ್ಕಾರ ಚುನಾಯಿತ ರಾಜ್ಯಪಾಲರು ಮುಖ್ಯಸ್ಥರಲ್ಲವೇ? ಕೇಂದ್ರದ ಎಲ್ಲಾ ನಿರ್ದೇಶನಗಳಿಗೆ ರಾಜ್ಯ ಸರ್ಕಾರಗಳು ತಲೆಬಾಗಬೇಕೆಂಬ ಯಾವುದೇ ನಿಯಮಗಳೂ ಇಲ್ಲ. ರಾಜ್ಯದಲ್ಲಿ ಅನೇಕ ಪ್ರವಾಹ ಪೀಡಿತರು ಇನ್ನು ನಿರಾಶ್ರಿತರಾಗಿದ್ದಾರೆ. ಬೀದಿಗಳಲ್ಲಿ ವಾಸ ಮಾಡುತ್ತಿದ್ದಾರೆ. ದುರಂತ ಸಂಭವಿಸಿ ಹಲವು ತಿಂಗಳುಗಳು ಕಳೆದರೂ ಈ ಸಂತ್ರಸ್ತರಿಗೆ ಸ್ಪಷ್ಟ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮನೆಕಳೆದುಕೊಂಡವರಿಗೆ, ಬೆಳೆ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ. ನಷ್ಟ ಅವುಭವಿಸುತ್ತಿರುವ ವಾಣಿಜ್ಯ ಸಂಸ್ಥೆಗಳಿಗೆ ಪರಿಹಾರ ಬರುವ ಯಾವುದೇ ಲಕ್ಷಣಗಳೂ ಕಂಡು ಬರುತ್ತಿಲ್ಲ. ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಈ ಬಗ್ಗೆ ಒಂದು ಪದವನ್ನೂ ಮಾತನಾಡಿಲ್ಲ. ಕೇಂದ್ರ ಸರ್ಕಾರದಿಂದ ರೂ.35,000 ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದೆವು. ಆದರೆ, ರಾಜ್ಯಕ್ಕೆ ಸಿಕ್ಕಿರುವುದು ಕೇವಲ ರೂ.1,869 ಕೋಟಿ ಮಾತ್ರ. ಅಧಿಕಾರದಲ್ಲಿರುವ ಸಚಿವರು ಸಂತ್ರಸ್ತರ ಅಳಲನ್ನು ಕೇಳುತ್ತಿಲ್ಲ. ಜಿಲ್ಲೆಗಳಿಗೆ ಭೇಟಿ ನೀಡುತ್ತಿಲ್ಲ. ಸಚಿವರಿಲ್ಲದ ಕಾರಣ ಕೆಲ ಇಲಾಖೆಗಳು ಕಾರ್ಯಗಳನ್ನು ಸ್ಥಗಿತಗೊಳಿಸಿವೆ.
ಸಂಪುಟ ಪುನಾರಚನೆಗೊಂಡ ಬಳಿಕ ಬಿಜೆಪಿ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಳ್ಳುವುದು ಖಚಿತ. ಹಲವರು ಸಚಿವ ಸ್ಥಾನಕ್ಕಾಗಿ ಕಾದು ಕುಳಿತಿದ್ದಾರೆ. ಉಪ ಚುನಾವಣೆಯಲ್ಲಿ ಗೆದ್ದ ಎಲ್ಲಾ ಬಂಡಾಯ ಶಾಸಕರಿಗೂ ಬಿಜೆಪಿ ಸಚಿವ ಸ್ಥಾನ ನೀಡುವುದಿಲ್ಲ. ನಮಗೆ ಬಂದಿರುವ ಮಾಹಿತಿ ಪ್ರಕಾರ ಈಗಾಗಲೇ ಬಿಜೆಪಿ ವಿರುದ್ಧ ಬಂಡಾಯ ಬಣ ರಚನೆಗೊಂಡಿದೆ. ಸಂಪುಟ ಪುನಾರಚನೆಗೊಂಡ ಬಳಿಕ ಯಾವುದೇ ನಿರ್ಧಾರ ಕೈಗೊಳ್ಳುವುದಾಗಿ ಈಗಾಗಲೇ ಅಡಗೂರ್ ಹೆಚ್ ವಿಶ್ವನಾಥ್ ಅವರು ಹೇಳಿದ್ದಾರೆಂದು ತಿಳಿಸಿದ್ದಾರೆ.
Advertisement