ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಮುಖ್ಯ ಮಂತ್ರಿ ಅಲ್ಲ, ಅವರು ವಿಪಕ್ಷ ನಾಯಕರು. ಅವರು ಇನ್ನೂ ಮುಖ್ಯಮಂತ್ರಿ ಎನ್ನುವ ಗುಂಗಿನಲ್ಲಿ ಇದ್ದಾರೆ. ಅವರು ನಮಗೆ ಆದೇಶ ಮಾಡಲು ಬರುವುದಿಲ್ಲ. ಅವರ ಪಕ್ಷದಲ್ಲಿರುವವರಿಗೆ ಆದೇಶ ಮಾಡುವ ಅಧಿಕಾರ ಸಿದ್ದರಾಮಯ್ಯ ಅವರಿಗೆ ಇಲ್ಲ. ತನಿಖೆ ಮಾಡಿ ಅಂತ ಅವರು ಹೇಗೆ ಆದೇಶ ಮಾಡುತ್ತಾರೆ ಎಂದು ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಗೃಹ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷದವರ ಬುರುಡೆ ಆಪಾದನೆಗೆ ನಿನ್ನೆ ಐದು ಜನ ಸಚಿವರು ಉತ್ತರ ಕೊಟ್ಟಿದ್ದೇವೆ. ನಮ್ಮ ಉತ್ತರಕ್ಕೆ ಅವರ ಜವಾಬು ನೀಡುವುದಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಖರೀದಿಸಲಾದ ವೆಂಟಿಲೇಟರ್ ಬಗ್ಗೆ ಆಗಲೇ ಪ್ರಶ್ನೆ ಮಾಡಿಲಿಲ್ಲವೇಕೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಪ್ರಶ್ನೆ ಮಾಡಲು ನಾನು ಅವರ ಪಕ್ಷದಲ್ಲಿ ಇಲ್ಲ. ಅವರು ಹೇಳಿದಂತೆಲ್ಲಾ ಕೇಳುವುದಕ್ಕೆ ಹೇಳುವದಕ್ಕೆ ಅವರು ಯಾರು ಎಂದು ಪ್ರಶ್ನಿಸಿದ್ದಾರೆ.
ವಿಪಕ್ಷದವರನ್ನು ಕೇಳಿಕೊಂಡು ಎಲ್ಲವನ್ನು ಮಾಡಲಿಕ್ಕೆ ಸಾಧ್ಯವಿಲ್ಲ. ಯಾವಾಗ ಯಾವ ಬಾಣ ಬಿಡಬೇಕು ಎಂಬುದು ನನಗೆ ಗೊತ್ತಿದೆ. ಹಿಂದೆ ಅದಕ್ಕೆ ಅವಕಾಶ ಇರಲಿಲ್ಲ ಈಗ ವಿಷಯಗಳು ಚೆರ್ಚೆಗೆ ಬಂದಿದೆ. ಈಗ ಚರ್ಚೆ ಮಾಡುತ್ತಿದ್ದೇವೆ. ನಮಗೆ ಆದೇಶ ಮಾಡಲು ಸಿದ್ದರಾಮಯ್ಯ ಅವರು ಯಾರು? ಅವರಿಗೆ ತನಿಖೆ ಮಾಡಿ ಎಂದು ಆದೇಶ ಮಾಡುವ ಅಧಿಕಾರವಿಲ್ಲ. ಅಧಿಕಾರ ಇರೋದು ಯಡಿಯೂರಪ್ಪ ಅವರಿಗೆ ಮಾತ್ರ ಎಂದಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಕೋವಿಡ್ ರೋಗಿಗಳನ್ನು ಮನೆಗೆ ಹೋಗಿ ಭೇಟಿ ಮಾಡಲು ಧೈರ್ಯ ಇಲ್ಲ. ಕೋವಿಡ್ ಸೋಂಕಿತರನ್ನು, ವೈದ್ಯರನ್ನು, ವಾರಿಯರ್ಸ್ ಗಳನ್ನು ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಲಿ. ಹಾಗಾದರೆ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಬಿಜೆಪಿ ಸಾಕಷ್ಟು ಆರೋಪಗಳನ್ನು, ಆಪಾದನೆಗಳಿಗೆ ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ತನಿಖೆಗೆ ಆದೇಶ ಮಾಡಿಸಲಿಲ್ಲವೇಕೆ. ಯಾವುದಕ್ಕೆ ತನಿಖೆ ಮಾಡಬೇಕು ಎಂಬುದು ಸರ್ಕಾರಕ್ಕೆ ತಿಳಿದಿದೆ. ಇವರು ಹೇಳಿದಕ್ಕೆಲ್ಲಾ ತನಿಖೆ ಮಾಡಲು ಹೊರಟರೆ ರಾಜ್ಯದ ಪೊಲೀಸರು ಸಾಲುವುದಿಲ್ಲವೆಂದು ಸಚಿವರು ಪ್ರತಿಕ್ರಿಯಿಸಿದರು.
ಐದು ಜನ ಸಚಿವರು ಸುದ್ದಿಗೋಷ್ಠಿ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಪಂಚ ಪಾಂಡವರು ಐವರು ಬಂದಿದ್ದೇವೆ. ಆದರೆ ಸಿದ್ದರಾಮಯ್ಯ ಅವರ ಸುದ್ದಿಗೋಷ್ಠಿಗೆ ಇಬ್ಬರೇ ಇಬ್ಬರು ಬಂದಿದ್ದಾರೆ. ಕೌರವರು ಅಷ್ಟು ಜನ ಇದ್ದರೂ ಯಾವಗಲೂ ಇಬ್ಬರೇ ಬರುತ್ತಾರೆ. ಅವರು ಇಬ್ಬರು ಯಾರು ಅಂತಾ ಎಲ್ಲರಿಗೂ ಗೊತ್ತಿದೆ ಎಂದು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಕಿಚಾಯಿಸಿದರು.
ಬಿಬಿಎಂಪಿ ಸದಸ್ಯರು ಕೋವಿಡ್ ಕೆಲಸ ಮಾಡುತ್ತಿದ್ದಾರೆ, ಬೆಡ್ ನೀಡದ 8 ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ನೋಟಿಸ್ ನೀಡಿದ್ದೇವೆ, ಆಸ್ಪತ್ರೆಗಳ ರಹದಾರಿ(ಲೈಸೆನ್ಸ್) ರದ್ದತಿಗೆ ಕ್ರಮ ತೆಗೆದು ಕೊಳ್ಳಲಾಗುವುದು. ಕೆಲ ಖಾಸಗಿ ಆಸ್ಪತ್ರೆಗಳು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿವೆ. ಅಂತಹ ಪ್ರಾಮಾಣಿಕ ಆಸ್ಪತ್ರೆಗಳಿಗೆ ತೆರಿಗೆ ವಿನಾಯಿತಿ ನೀಡು ವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ಅವರು ಸಹ ಈ ಬಗ್ಗೆ ಕೂಡ ಸಕಾರಾತ್ಮಕವಾಗಿ ತೆಗೆದುಕೊಂಡಿ ದ್ದಾರೆ. ಇದರಿಂದ ಸರ್ಕಾರದಿಂದ ಖಾಸಗಿ ಆಸ್ಪತ್ರೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ ಹಾಗೂ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸಹಕಾರಿಯಾಗಿಲಿದೆ ಎಂದು ಅವರು ತಿಳಿಸಿದರು.
ಇನ್ನು ಬೂತ್ ಮಟ್ಟದಲ್ಲೂ 10 ಸ್ವಯಂಸೇವಕರ ಪಟ್ಟಿ ತಯಾರಿಸಿದ್ದೇವೆ. ಪಾಸಿಟಿವ್ ಆಗಿರುವ ಕುಟುಂಬಕ್ಕೆ ಹೆಲ್ತ್ ಕಿಟ್ ಕೊಡುವ ನಿರ್ಧಾರವಾಗಿದೆ. ಕಿಟ್ನಲ್ಲಿ ಮಾಸ್ಕ್, ಥರ್ಮಲ್ ಮೀಟರ್, ಸ್ಯಾನಿಟೈಸರ್, ಔಷಧಿ ಸೇರಿ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆಗೆ ನಿರ್ಧಾರವಾಗಿದೆ. ಬಿಬಿಎಂಪಿ ವಾರ್ಡ್ ಫಂಡ್ನಲ್ಲಿ ಈ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
Advertisement