

ಕೊಪ್ಪಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ ಧಮ್ಮು, ಕೆಮ್ಮು ಪರೀಕ್ಷೆ ಮಾಡುವ ಸಮಯ ಇದಲ್ಲ. ಧಮ್ ಇವೆಲ್ಲ ಯಾವ ಭಾಷೆಯ ಪದಗಳು. ಇದರಲ್ಲಿ ಧಮ್ ತೋರಿಸುವಂತಹದ್ದು ಏನಿದೆ ಎಂದು ಕೃಷಿ ಸಚಿವರೂ ಆಗಿರುವ ಕೊಪ್ಪಳ ಉಸ್ತುವಾರಿ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.
ಕೊಪ್ಪಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಂದಿದ್ದಾರೆ. ಕೇಂದ್ರ ಸರ್ಕಾರ ನಮ್ಮ ಪಾಲನ್ನು ಕೊಟ್ಟಿದೆ. ಇದರಲ್ಲಿ ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದರೂ ಸಹ ಅವರು ದಿನಕ್ಕೆ ಹತ್ತು ಹದಿನೈದು ಸಭೆಗಳನ್ನು ನಡೆಸುತ್ತಾರೆ. ಹೊರ ರಾಜ್ಯದವರು ಬರದೆ ಹೋಗಿದ್ದಲ್ಲಿ ಕರ್ನಾಟಕದಲ್ಲಿ ಶೂನ್ಯ ಕೊರೊನಾ ಪ್ರಕರಣಗಳಾಗುತ್ತಿದ್ದವು. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು, ವಿರೋಧ ಮಾಡುವುದೇ ಅವರ ಕೆಲಸ. ಅವರು ವಿರೋಧಿಸುವುದನ್ನೇ ತಮ್ಮ ಆದ್ಯ ಕರ್ತವ್ಯ ಎಂದುಕೊಂಡಿದ್ದಾರೆ ಎಂದು ಕುಟುಕಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ದರ ನಿಗದಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ಬದುಕು ಬಹಳ ಮುಖ್ಯ. ಸರ್ಕಾರ ಎಲ್ಲಾ ಯೋಚನೆ ಮಾಡಿಯೇ ನಿರ್ಧಾರ ಮಾಡಿರುತ್ತದೆ ಎಂದು ಸಮರ್ಥಿಸಿಕೊಂಡರು. ದರ ಹೆಚ್ಚಲಿದೆ ಎಂಬ ಕಾರಣಕ್ಕೆ ಜೀವನ ಕಳೆದುಕೊಳ್ಳಲು ಆಗುವುದಿಲ್ಲ. ಇದರಲ್ಲಿ ಯಾವುದೇ ಲಾಬಿ ಇಲ್ಲ.ಖಾಸಗಿ ಆಸ್ಪತ್ರೆಯವರು ಸಹ ಸಿಬ್ಬಂದಿಗೆ ಸಂಬಳ ಕೊಡಬೇಕು. ಹೀಗಾಗಿ ದರ ನಿಗದಿ ಮಾಡಿರಬಹುದು. ದರ ಹೆಚ್ಚಾದಲ್ಲಿ ಸರ್ಕಾರ ಮತ್ತೆ ಯೋಚನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಕೆಲ ಬಿಜೆಪಿ ಶಾಸಕರಿಂದ ಬಿಜೆಪಿ ರಾಜ್ಯಾಧ್ಯಕ್ಷ ಭೇಟಿ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಿ.ಸಿ.ಪಾಟೀಲ್, ಭೇಟಿ ಅವರವರ ವೈಯಕ್ತಿಕ ವಿಚಾರ. ಶಾಸಕರು ಕ್ಷೇತ್ರಕ್ಕೆ ಅನುದಾನ ಬರದಿದ್ದರೆ ಪತ್ರ ಬರೆಯುವುದರಲ್ಲಿ ತಪ್ಪೇನಿಲ್ಲ ಎಂದರು. ಮಾಜಿ ಸಚಿವ ಎಚ್.ವಿಶ್ವನಾಥ್ ವಿರುದ್ಧ ಜೆಡಿಎಸ್ ಮುಖಂಡ ಸಾ. ರಾ ಮಹೇಶ್ ಅವರು ಮಾಡಿರುವ ಆರೋಪಕ್ಕೆ ವಿಶ್ವನಾಥರೇ ಉತ್ತರಿಸುತ್ತಾರೆ. ವಿಶ್ವನಾಥ್ ಬಹಳ ಬುದ್ಧಿವಂತರಿದ್ದಾರೆ. ಅವರೇ ಚೆನ್ನಾಗಿ ಉತ್ತರಿಸುತ್ತಾರೆಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಬಿ.ಸಿ.ಪಾಟೀಲ್ ಪ್ರತಿಕ್ರಿಯಿಸಿದರು.
ವರದಿ: ಬಸವರಾಜ ಕರುಗಲ್
Advertisement