ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಬಗ್ಗೆ ತಾವು ನೀಡಿರುವ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದೂ ಇಲ್ಲ. ಅವರಲ್ಲಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊರೆಸ್ವಾಮಿ ಹೋರಾಟದ ಬಗ್ಗೆ ತನಿಖೆಯಾಗಲಿ. ಅವರು ಬ್ರಿಟಿಷ್ ಲಾಠಿಯ ಬೂಟಿನ ಏಟು ತಿಂದಿದ್ದಾರೆಯೇ? ಕಾಲಾಪಾನಿ ಶಿಕ್ಷೆ ಎಷ್ಟು ಬಾರಿ ಅನುಭವಿಸಿದ್ದಾರೆ ? ಎಷ್ಟು ಸಲ ದೊರೆಸ್ವಾಮಿ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಗೆ ಮಾಡಲು ಬೇರೆ ಕೆಲಸವಿಲ್ಲ. ಹೀಗಾಗಿ ತಮ್ಮ ವಿರುದ್ಧ ಹೋರಾಟ ಮಾಡುತ್ತಿದೆ. ತಾವೇ ಸ್ವಂತಿಕೆಯಿಂದ ದೊರೆಸ್ವಾಮಿ ಬಗ್ಗೆ ಹೇಳಿಕೆ ನೀಡಿದ್ದೇನೆಯೇ ಹೊರತು ಆರ್ ಎಸ್ಎಸ್ ತಮ್ಮಿಂದ ಹೇಳಿಸಿಲ್ಲ ಎಂದರು.
ಹುಟ್ಟ ಹಿಂದೂವಾಗಿರುವ ತಾವು, ಹಿಂದೂಪರ ಮಾತನಾಡಿದ್ದೇನೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಕೊಡುತ್ತೇನೆಯೇ ಹೊರತು ನಕಲಿ ಹೋರಾಟಗಾರರಿಗೆ ಗೌರವ ಕೊಡುವುದಿಲ್ಲ ಎಂದು ಮತ್ತೆ ಹೇಳಿದರು.
ವಿಪಕ್ಷ ಸ್ಥಾನದಲ್ಲಿರುವ ಜೆಡಿಎಸ್ ಹೀಗೆಯೇ ಮಾಡುತ್ತಾ ಹೋದರೆ ಮುಂದೊಂದು ದಿನ ಶೂನ್ಯವಾಗುತ್ತದೆ ಎಂದು ಯತ್ನಾಳ್ ಭವಿಷ್ಯ ನುಡಿದರು. ನಾನು ಗಾಂಧಿ, ನಾನು ದೊರೆಸ್ವಾಮಿ ಅಭಿಯಾನ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ನಾನು ಸಾವರ್ಕರ್, ನಾನು ಸುಭಾಷ್ ಚಂದ್ರ ಬೋಸ್, ನಾನು ಭಗತ್ ಸಿಂಗ್. ಇವರನ್ನು ಬಿಟ್ಟು ಆ ಕಳ್ಳರ ಕತೆ ನನಗೇಕೆ? ಎಂದು ಯತ್ನಾಳ್ ಪ್ರಶ್ನಿಸಿದರು.
Advertisement