ಮೈಸೂರು: ಮೈಮುಲ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಸಾ. ರಾ ಮಹೇಶ್ ಅವರೇ ಪ್ರಯತ್ನಿಸಿದ್ದರು. ಹುದ್ದೆಗಳ ನೇಮಕಾತಿ ವೇಳೆ ಜನಪ್ರತಿನಿಧಿಗಳ ಮೇಲೆ ಒತ್ತಡಗಳು ಬರುವುದು ಸರ್ವೇ ಸಾಮಾನ್ಯ. ಆದರೂ ನ್ಯಾಯಸಮ್ಮತವಾಗಿ ಹುದ್ದೆಗಳ ನೇಮಕಾತಿ ಮಾಡಬೇಕು ಎಂದು ಮೈಮುಲ್ ನೇಮಕಾತಿಯಲ್ಲಿ ಅವ್ಯವಹಾರ ಆರೋಪದ ಬಗ್ಗೆ ಶಾಸಕ ಜಿ. ಟಿ. ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.
ಸಾ. ರಾ. ಮಹೇಶ್ ಮಾಡಿರುವ ಆರೋಪಿಗಳ ಬಗ್ಗೆಯಾಗಲೀ, ಆಡಿಯೋ ಸಂಭಾಷಣೆ ಬಗ್ಗೆ ನಮಗೇನು ಗೊತ್ತಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಸಹಕಾರ ಸಚಿವರ ಸೂಚನೆಯ ಮೇರೆಗೆ ಸಂದರ್ಶನವನ್ನು ಮುಂದೂಡಲಾಗಿದೆ ಎಂಬುದಷ್ಟೇ ತಮಗೆ ಮಾಹಿತಿ ಇದೆ. ಮೈಮುಲ್ ನಲ್ಲಿ ಸಿಬ್ಬಂದಿಗಳ ಕೊರತೆಯಿರುವುದರಿಂದ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ ಎಂದು ಶಾಸಕ ಜಿ. ಟಿ. ದೇವೇಗೌಡ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಮೈಸೂರು ಮೈಮುಲ್ ಅಕ್ರಮ ನೇಮಕಾತಿ ವಿಚಾರಕ್ಕೆ ಸಂಬಂಧಿಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಹಾಗೂ ಶಾಸಕ ಸಾ.ರಾ.ಮಹೇಶ್, ಅಕ್ರಮ ನೇಮಕಾತಿಯನ್ನು ಖಂಡಿಸಿ ಮೈಸೂರು ಹಾಲು ಒಕ್ಕೂಟದ ಮುಂದೆ ಮೇ 19ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದರು.
Advertisement