ಬೆಂಗಳೂರು: ತುಂಗಭದ್ರಾ ಕಾಡಾ ಅಧ್ಯಕ್ಷ ಆರ್.ಬಸನಗೌಡ ತುರುವಿಹಾಳ ತಮ್ಮ ಸ್ಥಾನ ರಾಜೀನಾಮೆ ನೀಡಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಮಸ್ಕಿ ಉಪ ಚುನಾವಣೆ ಘೋಷಣೆಯಾಗುವ ಸಮಯದಲ್ಲಿ ಕಾಂಗ್ರೆಸ್ ಸೇರ್ಪಡೆ ಬಿಜೆಪಿ ವಲಯದಲ್ಲಿ ತಲ್ಲಣ ಮೂಡಿಸಿದೆ. 2018 ರಲ್ಲಿ ಮಸ್ಕಿಯಲ್ಲಿ ಕಾಂಗ್ರೆಸ್ನಿಂದ ಪ್ರತಾಪಗೌಡ, ಬಿಜೆಪಿಯಿಂದ ಬಸನಗೌಡ ತುರ್ವಿಹಾಳ ಸ್ಪರ್ಧಿಸಿದ್ದರು. ಕೇವಲ 213 ಮತಗಳ ಅಂತರದಲ್ಲಿ ಪ್ರತಾಪಗೌಡ ಗೆಲುವು ಸಾಧಿಸಿದ್ದರು.
ಚುನಾವಣೆಯ ನಂತರ ಪ್ರತಾಪಗೌಡ ಅಕ್ರಮ ಮತದಾನ ಮಾಡಿಸಿದ್ದಾರೆ ಎಂದು ಬಸನಗೌಡ ತುರ್ವಿಹಾಳ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ. ವಜಾಗೊಳಿಸಿ ಎರಡು ತಿಂಗಳಾಗುತ್ತಾ ಬಂದರೂ ತೀರ್ಪಿನ ಪ್ರತಿ ಪ್ರತಾಪಗೌಡರ ಕೈಗೆ ಸೇರಿಲ್ಲ. ಈ ಮಧ್ಯೆ ಪ್ರತಾಪಗೌಡ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಿದ್ದರು. ಆಗಿನಿಂದಲೂ ಬಸನಗೌಡ ತುರ್ವಿಹಾಳರಿಗೆ ರಾಜಕೀಯ ಅತಂತ್ರ ಕಾಡುತ್ತಿತ್ತು.
ಮಧ್ಯೆ ಪ್ರತಾಪಗೌಡರಿಗೆ ಬಿಜೆಪಿ ಟಿಕೆಟ್ ಕನ್ಫರ್ಮ್ ಆಗುತ್ತಿದ್ದಂತೆ ಬಸನಗೌಡರಿಗೆ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನ ನೀಡಿದ್ದರು. ಆಗಲೂ ಸಹ ಮೊದಲು ನಿರಾಕರಿಸಿ ನಂತರ ಬಿಜೆಪಿ ಮುಖಂಡರ ಒತ್ತಾಯದ ಮೇರೆಗೆ ಒಪ್ಪಿಕೊಂಡಿದ್ದರು. ಈ ಮಧ್ಯೆ ಪ್ರತಾಪಗೌಡರ ವಿರುದ್ದ ತೀರ್ಪು ವಜಾಗೊಳ್ಳುತ್ತಿದ್ದಂತೆ ಮಸ್ಕಿಯಲ್ಲಿ ಚುನಾವಣೆ ಸಿದ್ದತೆ ನಡೆದಿದೆ. ತುರುವಿಹಾಳ ಸೇರ್ಪಡೆಯಿಂದ ಜಿಲ್ಲಾ ಕಾಂಗ್ರೆಸ್ ಗೆ ಮತ್ತಷ್ಟು ಬಲ ಬಂದಿದೆ.
ಉಪ ಚುನಾವಣೆಯಲ್ಲಿ ಲಿಂಗಾಯತ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬದಲಾಗಲಿವೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ ಎಂದು ವಿಶ್ಲೇಶಕರು ಅಭಿಪ್ರಾಯ ಪಟ್ಟಿದ್ದಾರೆ. ಮಸ್ಕಿಯಲ್ಲಿ 60 ಸಾವಿ ಲಿಂಗಾಯತರು, 50 ಸಾವಿರ ವಾಲ್ಮೀಕಿ ಮತದಾರರು, 40 ಸಾವಿರ ಎಸ್ ಸಿ ಹಾಗೂ 16 ಸಾವಿರ ಕುರುಬರು ಮತ್ತು 10 ಸಾವಿರ ಕುರುಬ ಮತದಾರರಿದ್ದಾರೆ.
Advertisement