ಬೆಂಗಳೂರು: ಜೆಡಿಎಸ್ ಸ್ವಾರ್ಥಿಗಳಿಂದ ಕೂಡಿರುವ ಅವಕಾಶವಾದಿ ಪಕ್ಷ. ದೇವೇಗೌಡ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಹೋದವರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಎಂ.ಎಲ್.ಸಿ. ಜೆ.ಡಿ.ಎಸ್. ವಕ್ತಾರ ರಮೇಶ್ ಬಾಬು ಅವರನ್ನು ಪಕ್ಷಕ್ಕೆ ಸೇರ್ಪಡೆಮಾಡಿಕೊಂಡು ಮಾತನಾಡಿದ ಸಿದ್ದರಾಮಯ್ಯ, ದೇವೇಗೌಡ ಕಾಂಗ್ರೆಸ್ ನಿಂದ ತಾಲೂಕು ಮಂಡಳಿಗೆ ಸದಸ್ಯರಾಗಿದ್ದವರು. ಅವರಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಪಕ್ಷೇತರ ಅಭ್ಯರ್ಥಿಯಾದರು. ರಾಮಕೃಷ್ಣ ಹೆಗಡೆ ಕೂಡ ಕಾಂಗ್ರೆಸ್ ಮೂಲದವರು ಎಂದರು.
ಈ ದೇಶದಲ್ಲಿ ಕಾಂಗ್ರೆಸ್ ಕೇವಲ ಅಧಿಕಾರಕ್ಕಾಗಿ ಹೋರಾಟ ಮಾಡಿಲ್ಲ. ಸಮಾಜದಲ್ಲಿ ಬದಲಾವಣೆ ತರಲು ಕಾರ್ಯನಿರ್ವಹಿಸಿದೆ. ಕ್ರಾಂತಿಕಾರಿ ಹಾಗೂ ಮಹಾನ್ ನಾಯಕರು ಕಾಂಗ್ರೆಸ್ ಪಕ್ಷದಲ್ಲೇ ಹುಟ್ಟಿದವರು. ಕಾಂಗ್ರೆಸ್ ಕೇವಲ ರಾಜಕೀಯ ಪಕ್ಷ ಅಲ್ಲ. ಸಮಾನತೆಯ ವ್ಯವಸ್ಥೆ ನಿರ್ಮಾಣ ಮಾಡುವುದು ಕಾಂಗ್ರೆಸ್ ನ ಧ್ಯೇಯ ಎಂದರು.
ಹಿಂದುತ್ವ ಎನ್ನುವುದು ಅಫೀಮು.ಈ ಅಫೀಮನ್ನು ಯುವಕರಿಗೆ ನೀಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮೋದಿ ಹುಟ್ಟಿದ ಹಬ್ಬದ ದಿನವನ್ನು ನಿರುದ್ಯೋಗ ದಿನ ಎಂದು ಆಚರಣೆ ಮಾಡಿದ್ದಾರೆ. ಮೋದಿ ದೇಶದ ಆರ್ಥಿಕ ವ್ಯವಸ್ಥೆ ಹಾಳು ಮಾಡಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಕುಸಿಯಲು ಮೋದಿ ನೇರ ಕಾರಣ. ಮೋದಿ ಕೊಟ್ಟ ಒಂದೇ ಒಂದು ಭರವಸೆ ಇದುವರೆಗೆ ಈಡೇರೆಸಿಲ್ಲ. ಇಡೀ ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
Advertisement