ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ಸಂಕಷ್ಟದ ನಡುವೆಯು ರಾಜ್ಯ ಸರ್ಕಾರ ಶೇ.71.61 ರಷ್ಟು ಜಿಎಸ್ ಟಿ ಸಂಗ್ರಹ ಮಾಡಿದೆ.ಆದರೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ರೂ.13,764 ಕೋಟಿ ರೂ ಬಾಕಿ ಉಳಿ ಸಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪತ್ರ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಜಿಎಸ್ ಟಿ ಪರಿಹಾರ ಜನವರಿಯವರೆಗೆ ಇದು ರೂ.27,000 ಕೋಟಿ ರೂಗೆ ಏರಿಕೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಕೇಂದ್ರವು 15ನೇ ಹಣಕಾಸು ಆಯೋಗದ ವರದಿಯಲ್ಲೂ ರಾಜ್ಯಕ್ಕೆ ಭೀಕರ ತಾರತಮ್ಯ ಮಾಡಿದೆ. ಈಗ ಜಿಎಸ್ ಟಿಯಲ್ಲೂ ದ್ರೋಹ ಮಾಡುತ್ತಿದೆ ಎಂದು
ನಿನ್ನೆ ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಆದ ತೀರ್ಮಾನವನ್ನು ವಿರೋಧಿಸಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಕೇಂದ್ರದಿಂದ ಜಿಎಸ್ ಟಿ ಪರಿಹಾರ ಪಡೆಯುವ ಪ್ರಯತ್ನ ಮಾಡಬೇಕು. ಯಾವುದೇ ಕಾರಣಕ್ಕೂ ಸಾಲ ಪಡೆಯುವ ತೀರ್ಮಾನ ತೆಗೆತುಕೊಳ್ಳುವುದು ಬೇಡ ಎಂದು ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕೇಂದ್ರ ಸರ್ಕಾರವು ಕೋವಿಡ್-19 ನಿಂದಾಗಿ ಜಿಎಸ್ ಟಿ ಸಂಗ್ರಹದಲ್ಲಿ ರೂ.3 ಲಕ್ಷ ಕೋಟಿಗಳಷ್ಟು ಕೊರತೆಯಾಗಲಿದೆ ಹಾಗೂ ಜಿಎಸ್ ಟಿ ವ್ಯವಸ್ಥೆಯಿಂದ ಆಗಿರುವ ಆದಾಯ ಕೊರತೆ ರೂ.97,000 ಗಳಷ್ಟಾಗಲಿದೆ. ಇದರಲ್ಲಿ 2.35 ಲಕ್ಷ ಕೋಟಿ ರೂಪಾಯಿಗಳ ಜಿಎಸ್ಟಿ ಪರಿಹಾರವನ್ನು ಈ ವರ್ಷ ನೀಡಲಾಗು ವುದಿಲ್ಲವೆಂದು ತಿಳಿಸಿ ಆರ್ ಬಿಐ ನಿಂದ ಸಾಲ ಪಡೆದುಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ.
ಕೇಂದ್ರ ಸರ್ಕಾರದ ಈ ನಿಲುವು ಸಂವಿಧಾನ ಬಾಹಿರ. ಸೆಕ್ಷನ್ 18 ರ ಪ್ರಕಾರ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಜಿ.ಎಸ್.ಟಿ. ಪರಿಹಾರವನ್ನು ಕಡ್ಡಾಯವಾಗಿ ನೀಡಬೇಕಾಗಿದೆ. ಇದನ್ನು ಪಡೆದುಕೊಳ್ಳುವುದು ರಾಜ್ಯಗಳ ಸಂವಿಧಾನಾತ್ಮಕ ಅಧಿಕಾರವಾಗಿದೆ ಎಂದಿದ್ದಾರೆ.
ಆದರೆ ಕೇಂದ್ರ ಸರ್ಕಾರವು ಒಕ್ಕೂಟ ತತ್ವದ ನಿಯಮಗಳಿಗೆ ವಿರುದ್ಧವಾಗಿ ವರ್ತಿಸುತ್ತಿದೆ. ತಾನು ಪರಿಹಾರ ನೀಡುವುದನ್ನು ತಪ್ಪಿಸಿಕೊಂಡು ರಾಜ್ಯಗಳು ಆರ್.ಬಿ.ಐ.ನಿಂದ ಸಾಲ ಪಡೆದುಕೊಂಡು ಪರಿಸ್ಥಿತಿಯನ್ನು ನಿಭಾಯಿಸುವಂತೆ ಹೇಳುತ್ತಿರುವುದು ರಾಜ್ಯದ ಜನರಿಗೆ ಮಾಡುತ್ತಿರುವ ಅತ್ಯಂತ ದೊಡ್ಡ ದ್ರೋಹವೆಂದು ಪರಿಗಣಿಸಬೇಕಾಗಿದೆ. ರಾಜ್ಯಗಳಿಗೆ ನ್ಯಾಯಯುತವಾಗಿ ನೀಡಬೇಕಾದ ಪರಿಹಾರದ ಬದಲಾಗಿ ಸಾಲದ ರೂಪದಲ್ಲಿ ಹಣ ಪಡೆದರೆ ಅದನ್ನು ಬಡ್ಡಿ ಸಮೇತ ತೀರಿಸುವ ಜವಾಬ್ದಾರಿ ರಾಜ್ಯಗಳದ್ದಾಗಿರುತ್ತದೆ. ಇದರಿಂದಾಗಿ ರಾಜ್ಯಗಳ ಅಭಿವೃದ್ಧಿಗೆ ತೊಂದರೆಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement