ಮೈಸೂರು: ಕಾಂಗ್ರೆಸ್ ನಾಯಕರಂತೆ ಸೋನಿಯಾ ಮುಂದೆ ಮಂಡಿಯೂರಿ ಮಾತನಾಡುವಂತ ದಯನೀಯ ಸ್ಥಿತಿ ಬಿಜೆಪಿಯವರಿಗೆ ಬಂದಿಲ್ಲ ಎಂದು ಸಂಸದ ಪ್ರತಾಪ್ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನಿನ್ನೆ ನೆರೆ ಪರಿಹಾರದ ಬಗ್ಗೆ ಮೋದಿ ಮಾತನಾಡಲಿಲ್ಲ ಎಂಬ ಕಾಂಗ್ರೆಸ್ ಟೀಕೆಗೆ ತಿರುಗೇಟು ಕೊಟ್ಟರು. ಕಾಂಗ್ರೆಸ್ ನಾಯಕರಿಂದ ನಾವು ಸರ್ಟಿಫಿಕೇಟ್ ಪಡೆಯಬೇಕಾಗಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದ ಜನ ನಮಗೆ 1998 ರಿಂದ ಸಂಸದರ ಸಂಖ್ಯೆ ಹೆಚ್ಚಿಸುತ್ತಲೇ ಬಂದಿದ್ದಾರೆ. ಮೋದಿಯೂ ಯಾವಾಗಲು ರಾಜ್ಯದ ಪರ ಇದ್ದಾರೆ. ಕಾಂಗ್ರೆಸ್ ನಾಯಕರಿಂದ ಹೇಳಿಸಿಕೊಂಡು ನಾವು ಮೋದಿ ಜೊತೆ ಮಾತನಾಡಬೇಕಿಲ್ಲ ಎಂದು ಹೇಳಿದರು.
ಇನ್ನು ಸಿದ್ದಗಂಗಾ ಮಠದಲ್ಲಿ ಪ್ರಧಾನಿ ಮೋದಿ ಭಾಷಣದ ಬಗ್ಗೆ ಕಾಂಗ್ರೆಸಿಗರು ಟೀಕೆ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಕಾಂಗ್ರೆಸ್ಗೆ ಯಾಕೆ ಈ ಮಟ್ಟದ ಉರಿ ಅಂತ ನಮಗೆ ಗೊತ್ತಾಗುತ್ತಿಲ್ಲ. ಮಠಕ್ಕೆ ಹೋದ ಪ್ರಧಾನಿಯನ್ನ ಸಿದ್ದರಾಮಯ್ಯ ಟೀಕಿಸುತ್ತಾರೆ. ಪ್ರಧಾನಿ ವಿಭೂತಿಯನ್ನ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ವ್ಯಂಗ್ಯ ಮಾಡುತ್ತಾರೆ. ಕಾಲಭೈರವೇಶ್ವರನ ಜಾಗದಲ್ಲಿ ಡಿಕೆ ಶಿವಕುಮಾರ್ ಏಸು ಪ್ರತಿಮೆ ನಿರ್ಮಾಣ ಮಾಡ್ತೀನಿ ಅಂತಾರೆ. ಇದನ್ನ ನೋಡಿದ್ರೆ ಶಿವನ ಭಕ್ತರ ಬಗ್ಗೆ ಕಾಂಗ್ರೆಸ್ಗೆ ಮತ್ಸರ ಉಂಟಾಗಿರಬೇಕು. ಯಾಕಾಗಿ ಇಷ್ಟು ಮತ್ಸರ ಗೊತ್ತಾಗುತ್ತಿಲ್ಲ. ಯಾಕೆ ಇಷ್ಟು ಉರಿ ಎಂಬುದು ಗೊತ್ತಿಲ್ಲ ಎಂದು ಕುಟುಕಿದ್ದಾರೆ.
Advertisement