ಉಪ ಚುನಾವಣೆಗೆ ಸಿದ್ಧ, ಬಿಜೆಪಿ ಸೇರುವ ಬಗ್ಗೆ ಚಿಂತಿಸಿಲ್ಲ: ಮಧ್ಯಪ್ರದೇಶ ಶಾಸಕರು

ತಾವು ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನು ಬೆಂಬಲಿಸುತ್ತಿದ್ದರೂ, ಬಿಜೆಪಿ ಸೇರುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಮಧ್ಯಪ್ರದೇಶದ ಕಾಂಗ್ರೆಸ್‌ನ ಬಂಡಾಯ ಶಾಸಕರು ಹೇಳಿದ್ದಾರೆ
ಮಧ್ಯ ಪ್ರದೇಶ ಶಾಸಕರು
ಮಧ್ಯ ಪ್ರದೇಶ ಶಾಸಕರು

ಬೆಂಗಳೂರು: ತಾವು ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನು ಬೆಂಬಲಿಸುತ್ತಿದ್ದರೂ, ಬಿಜೆಪಿ ಸೇರುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಮಧ್ಯಪ್ರದೇಶದ ಕಾಂಗ್ರೆಸ್‌ನ ಬಂಡಾಯ ಶಾಸಕರು ಹೇಳಿದ್ದಾರೆ

ಬೆಂಗಳೂರಿನ ರೆಸಾರ್ಟ್‌ ಒಂದರಲ್ಲಿ ತಂಗಿರುವ ಅವರು, ಬಂಡಾಯ ಶಾಸಕರ ಇಚ್ಛೆಗೆ ವಿರುದ್ಧವಾಗಿ ಬೆಂಗಳೂರಿನಲ್ಲಿ ಅವರನ್ನು ಕೂಡಿ ಹಾಕಲಾಗಿದೆ ಎಂಬ ಸಿ.ಎಂ ಕಮಲನಾಥ್‌ ಹೇಳಿಕೆಯನ್ನು ಅಲ್ಲಗಳೆಯಲು ಹಾಗೂ ಅವರ ಕಾರ್ಯವೈಖರಿಯಿಂದಾಗಿಯೇ ಕಾಂಗ್ರೆಸ್‌ ಶಾಸಕರಲ್ಲಿ ಅಸಮಾಧಾನ ಇದೆ ಎಂಬುದನ್ನು ತಿಳಿಸಲು ಈ ಪತ್ರಿಕಾಗೋಷ್ಠಿ ನಡೆಸಲಾಗಿದೆ ಎಂದರು.

‘ನಮಗೆ ಕಮಲನಾಥ್‌ ಅವರಿಂದ ಬೆದರಿಕೆ ಇದೆ, ಹೀಗಾಗಿ ಕೇಂದ್ರೀಯ ಪಡೆಗಳಿಂದ ರಕ್ಷಣೆ ನೀಡಬೇಕು’ ಎಂದು ಶಾಸಕ ಗೋವಿಂದ್ ಸಿಂಗ್‌ ರಜಪೂತ್‌ ಹೇಳಿದರು.

ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮುಖ್ಯಮಂತ್ರಿ ಕಮಲ್ ನಾಥ್ ಮಾಡಲಿಲ್ಲ. ಅವರ ಆಡಳಿತ ವೈಖರಿಯಿಂದ ಬೇಸತ್ತು ಸ್ವಯಂಪ್ರೇರಿತವಾಗಿ ಶಾಸಕ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದೇವೆ ಎಂದು ಶಾಸಕರು ತಿಳಿಸಿದ್ದಾರೆ.

ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ಕಮಲ್ ನಾಥ್ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಆದ್ದರಿಂದ ನಾವು ಸ್ವಯಂಪ್ರೇರಿತವಾಗಿ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದೇವೆ ಎಂದವರು ಸ್ಪಷ್ಟಪಡಿಸಿದರು.

ಮಧ್ಯ ಪ್ರದೇಶದ 21 ಜನ ಬಂಡಾಯ ಕಾಂಗ್ರೆಸ್ ಶಾಸಕರಲ್ಲಿ ಹಲವರು ಕಳೆದ ಹಲವು ದಿನಗಳಿಂದ ಬೆಂಗಳೂರಿನ ಯಲಹಂಕ ಬಳಿಯ ರಮಡ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದಾರೆ. 

ಮಧ್ಯ ಪ್ರದೇಶದ ಸರ್ಕಾರದ ಬಿಕ್ಕಟ್ಟು ಮುಂದುವರಿದೇ ಇದೆ. ಇದಕ್ಕೆ ಇತಿಶ್ರೀ ಹಾಡಿ ಬಂಡಾಯ ಶಾಸಕರ ಮನವೊಲಿಸಿ ಅಲ್ಲಿಗೆ ವಾಪಸ್ ಕರೆದುಕೊಂಡು ಹೋಗಬೇಕೆಂದು ಕಳೆದ ತಡರಾತ್ರಿ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಬೆಂಗಳೂರಿಗೆ ಬಂದರು. 

ಅವರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಬರಮಾಡಿಕೊಂಡರು. ಅಲ್ಲಿ ಕೆಲ ಹೊತ್ತು ಮಾತುಕತೆ ನಡೆಸಿ ಇಂದು ಬೆಳಗ್ಗೆ ನೇರವಾಗಿ ಯಲಹಂಕದ ರಮಡ ರೆಸಾರ್ಟ್ ಬಳಿ ತೆರಳಿದರು. 

ಹೊಟೇಲ್ ಒಳಗೆ ಹೋಗಿ ಶಾಸಕರನ್ನು ಭೇಟಿ ಮಾಡಲು ಅನುವು ಮಾಡಿಕೊಡಿ ಎಂದು ಪೊಲೀಸರಲ್ಲಿ ಕೇಳಿಕೊಂಡರು. ಅದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಆಕ್ರೋಶಗೊಂಡು ರೆಸಾರ್ಟ್ ಹೊರಗೆ ಧರಣಿ ನಡೆಸಿದರು.
 
ಬೆಳ್ಳಂಬೆಳಗ್ಗೆ ಆ ಹಾದಿಯಲ್ಲಿ ಓಡಾಡುವ ನಾಗರಿಕರಿಗೆ ಸಂಚಾರ ದಟ್ಟಣೆ ಬಿಸಿ ತಟ್ಟಿತು. ಪೊಲೀಸರು ಕಾಂಗ್ರೆಸ್ ನಾಯಕರನ್ನು ಬಲವಂತವಾಗಿ ಪೊಲೀಸ್ ವಾಹನದಲ್ಲಿ ಕೂರಿಸಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ದರು. ಪೊಲೀಸರು ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಮಾತಿನ ಚಕಮಕಿ ನಡೆಯಿತು,
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com