ಯತ್ನಾಳ್ ವಿರುದ್ಧ ರಾಜ್ಯಾಧ್ಯಕ್ಷರು ಕ್ರಮಕೈಗೊಳ್ಳಲಿ: ಆಯನೂರು ಮಂಜುನಾಥ್

ಬಸನಗೌಡ ಪಾಟೀಲ್ ವಿರುದ್ಧ ಮೇಲ್ಮನೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಕಿಡಿಕಾರಿದ್ದು, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್

ಶಿವಮೊಗ್ಗ: ಇತ್ತೀಚೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡುವ ಹೇಳಿಕೆಗಳು ಸುದ್ದಿಯಾಗುತ್ತವೆಯೋ ಅಥವಾ ಸುದ್ದಿಗಾಗಿಯೇ ಇವರು ಹೇಳಿಕೆ ನೀಡುತ್ತಾರೋ ಗೊತ್ತಾಗುತ್ತಿಲ್ಲ. ಆದರೆ ಯತ್ನಾಳ್ ನೀಡುವ ಹೇಳಿಕೆಗಳು ಮಾತ್ರ ಸ್ವಪಕ್ಷೀಯರಿಗೆ ಮುಜುಗರವನ್ನುಂಟು ಮಾಡುವುದಂತೂ ಸತ್ಯ. 

ಇದೀಗ ಬಸನಗೌಡ ಪಾಟೀಲ್ ವಿರುದ್ಧ ಮೇಲ್ಮನೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಕಿಡಿಕಾರಿದ್ದು, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಆಡಿರುವ ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲ. ಇತ್ತೀಚೆಗೆ ಪ್ರಚಾರಕ್ಕಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಿರಿಯ ನಾಯಕರು ಸಭ್ಯತೆಯಿಂದ ಇದ್ದಾಗ ಇವರು ತಾವು ನಾಲ್ಕನೆಯವನು ಎಂದಿದ್ದಾರೆ. ಯಾರು ಇವರಿಗೆ ಲೆಕ್ಕ ಹೇಳಿಕೊಟ್ಟವರು ಎಂದು ಆಯನೂರು ಮಂಜುನಾಥ್ ಪ್ರಶ್ನಿಸಿದ್ದಾರೆ. ಇವರ ಹದ್ದುಮೀರಿದ ಹೇಳಿಕೆಗಳನ್ನು ಯಾರೂ ಒಪ್ಪಿಲ್ಲ. ಪಕ್ಷ ಇದನ್ನು ಗಂಭಿರವಾಗಿ ಪರಿಗಣಿಸಬೇಕು. ಪಕ್ಷ ಇವರನ್ನು ಕ್ಷಮಿಸಬಾರದು.‌ ರಾಜ್ಯಾಧ್ಯಕ್ಷರು ಇವರಿಗೆಲ್ಲಾ ಶೋಕಾಸ್ ನೋಟಿಸ್ ಜಾರಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ತುರ್ತು ಗಮನ ಹರಿಸಬೇಕು. ಯಡಿಯೂರಪ್ಪ ಸರ್ವಮಾನ್ಯ ಸಮೂಹ ನಾಯಕರು. ಯಡಿಯೂರಪ್ಪ ಅವರ ಹೆಸರಿಂದ ಶಾಸಕರಾದವರು ತುಂಬಾ ಶಾಸಕರಿದ್ದು ಅವರಲ್ಲಿ ಯತ್ನಾಳ್ ಕೂಡಾ ಒಬ್ಬರು ಎಂದರು.

ವಿಪತ್ತಿನ ಸಂದರ್ಭದಲ್ಲಿ ಯುವಕರೂ ನಾಚುವಂತೆ ಕೆಲಸ ಮಾಡಿದ್ದಾರೆ. ಈ ರೀತಿ ಕೆಲಸ ಮಾಡುವ ಸಂದರ್ಭದಲ್ಲಿ ಕೆಲ ಶಾಸಕರು ಊಟದ ನೆಪದಲ್ಲಿ ಸೇರಿ ನೀಡಿರುವ ಹೇಳಿಕೆಗಳು ಅಕ್ಷಮ್ಯ ಅಪರಾಧ. ಯಾವುದೇ ಹೇಳಿಕೆ ನೀಡುವ ಸ್ವಾತಂತ್ರ್ಯ ಇದೆ. ಆದರೆ, ಸ್ವಾತಂತ್ರ್ಯಕ್ಕೂ ಮಿತಿ ಇದೆ. ನಾನೇ ಸೀನಿಯರ್ ಎಂದು ಹೇಳಿಕೊಳ್ಳುವ ಭ್ರಮೆಯಿಂದ ಹೊರಬನ್ನಿ. ನಿಮಗಿಂತ ಸೀನಿಯರ್ ಗಳು ತುಂಬಾ ಜನ ಇದ್ದಾರೆ. ವಿವಾದಿತ ಹೇಳಿಕೆಗಳ ನೀಡುವ ಮೂಲಕ ನೆಗೆಟಿವ್ ಪ್ರಚಾರ ಪಡೆಯುತ್ತಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಹರಿಹಾಯ್ದರು.

ಕೊರೋನಾ ನಾಲ್ಕು ಹಂತ ದಾಟಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಅತ್ಯಂತ ದಕ್ಷತೆಯಿಂದ ಕೊರೋನಾ ನಿರ್ವಹಿಸಿದ್ದಾರೆ. ಹೊರಗಿನಿಂದ ಬಂದವರಿಂದ ಪ್ರಕರಣಗಳು ಹೆಚ್ಚಾಗಿವೆ. ಅಸಂಘಟಿತ ವಲಯದ ಕಾರ್ಮಿಕರ ಜೀವನಕ್ಕೆ ಭದ್ರತೆ ನೀಡಿದ್ದಾರೆ. 78ರ ಹರೆಯದಲ್ಲೂ ಹಗಲು-ರಾತ್ರಿ ಶ್ರಮಪಟ್ಟು ಕೆಲಸ ಮಾಡಿ, ಸೋಂಕು ನಿಯಂತ್ರಣಕ್ಕೆ ಕಾರಣರಾಗಿದ್ದಾರೆ. ಜನರಲ್ಲಿ ಭರವಸೆ, ನಂಬಿಕೆ ಮೂಡಿಸಿದ್ದಾರೆ. ನಾವೆಲ್ಲರೂ ಅವರನ್ನು ಹೆಮ್ಮೆಯಿಂದ ಅಭಿನಂದಿಸುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಅವರ ಆಡಳಿತ ವೈಖರಿಯನ್ನು ಹೊಗಳಿದ ಆಯನೂರು ಮಂಜುನಾಥ್, ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡು ಇಂದಿಗೆ ಒಂದು ವರ್ಷ ಪೂರೈಸಿದ್ದಾರೆ. ಪ್ರಪಂಚ ಮೆಚ್ಚಿರುವ ಅಪ್ರತಿಮ ನಾಯಕನಿಗೆ ಶುಭಾಶಯಗಳು. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೈಗೊಂಡ ಪ್ರಮುಖ ನಿರ್ಣಯಗಳು, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಕಲಂ ರದ್ದು, ತ್ರಿವಳಿ ತಲಾಖ್ ರದ್ದು, ಪೌರತ್ವ ತಿದ್ದುಪಡಿ ಕಾಯ್ದೆ, ರಾಮಜನ್ಮಭೂಮಿ ವಿವಾದ ಸುಖಾಂತ್ಯ ಗೊಳಿಸಿ ರಾಮಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದು ಅವರ ಸಾಧನೆಯಾಗಿದೆ. ಕೊರೋನ ವೈರಸ್ ವಿರುದ್ಧ ದಿಟ್ಟ ನಿರ್ಧಾರ ಕೈಗೊಂಡು ಜಾಗತಿಕ ಮನ್ನಣೆ ಪಡೆದು ವಿಶ್ವದ ಅಗ್ರಗಣ್ಯ ನಾಯಕರಾಗಿ ಹೊರಹೊಮ್ಮಿರುವುದು ಇವುಗಳು ಒಂದು ವರ್ಷದಲ್ಲಿನ ಅತ್ಯಂತ ಪ್ರಮುಖ ಸಾಧನೆಗಳಾಗಿವೆ ಎಂದು ಬಣ್ಣಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com