ಕಾಂಗ್ರೆಸ್ ನಾಯಕ ಟಿ.ಬಿ.ಜಯಚಂದ್ರ
ಕಾಂಗ್ರೆಸ್ ನಾಯಕ ಟಿ.ಬಿ.ಜಯಚಂದ್ರ

ಸಚಿವ ಮಾಧುಸ್ವಾಮಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಕಾಂಗ್ರೆಸ್ ಚಿಂತನೆ!

ಶಿರಾ ತಾಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ವಿಚಾರ ಸಂಬಂಧ ತುಮಕೂರಿನ ರಾಜಕೀಯ ಪ್ರಬಲ ವ್ಯಕ್ತಿಗಳಾದ ಮಾಜಿ ಕಾನೂನು ಸಚಿವ ಮತ್ತು ಕಾಂಗ್ರೆಸ್ ನಾಯಕ ಟಿ.ಬಿ.ಜಯಚಂದ್ರ ಹಾಗೂ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನಡುವೆ ಮಾತಿನ ಸಮರ ಆರಂಭವಾಗಿದೆ.
Published on

ತುಮಕೂರು: ಶಿರಾ ತಾಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ವಿಚಾರ ಸಂಬಂಧ ತುಮಕೂರಿನ ರಾಜಕೀಯ ಪ್ರಬಲ ವ್ಯಕ್ತಿಗಳಾದ ಮಾಜಿ ಕಾನೂನು ಸಚಿವ ಮತ್ತು ಕಾಂಗ್ರೆಸ್ ನಾಯಕ ಟಿ.ಬಿ.ಜಯಚಂದ್ರ ಹಾಗೂ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನಡುವೆ ಮಾತಿನ ಸಮರ ಆರಂಭವಾಗಿದೆ. 

ಶಿರಾ ತಾಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ವಿಚಾರ ಕುರಿತು ನಿನ್ನೆಯಷ್ಟೇ ಟಿಬಿ.ಜಯಚಂದ್ರ ಹಾಗೂ ಎಐಸಿಸಿ ವಕ್ತಾರ ಬ್ರಿಜೇಶ್‌ ಕಾಳಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. 

ಈ ವೇಳೆ ಮದಲೂರು ಕೆರೆಗೆ ಹೇಮಾವತಿ ನೀರು ಹಂಚಿಕೆಯಾಗಿದೆ. ಹೈಕೋರ್ಟ್‌ ಆದೇಶವೂ ಇದೆ. ಜೆ.ಸಿ.ಮಾಧುಸ್ವಾಮಿ ನೀರು ಬಿಡುವಂತಿಲ್ಲ ಎನ್ನುವುದು ನ್ಯಾಯಾಂಗ ನಿಂದನೆಯಾಗುತ್ತದೆ. ಹೀಗಾಗಿ ಮಾಧುಸ್ವಾಮಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಮದಲೂರು ಕೆರೆಗೆ ನೀರು ಹರಿಸಿದರೆ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ ಎಂದು ಬೆದರಿಕೆಯೊಡ್ಡುತ್ತಿರುವ ಸಚಿವ ಮಾಧುಸ್ವಾಮಿ ನೀರಾವರಿ ಹೋರಾಟಗಾರರೇ ಅಲ್ಲ. ನಾವು ಹೋರಾಟ ಮಾಡುವಾಗ ಅವರು ಇರಲೇ ಇಲ್ಲ. ಮದಲೂರು ಕೆರೆಗೆ 0.4 ಟಿಎಂಸಿ ನೀರು ಹಂಚಿಕೆಯಾಗಿದೆ. ಹೀಗಿದ್ದರೂ ಕಾನೂನು ಸಚಿವ ಪದೇ ಪದೆ ಮದಲೂರು ಕೆರೆಗೆ ನೀರು ಹರಿಸುವುದು ಕಾನೂನು ಬಾಹಿರ ಎಂದು ಕ್ಯಾತೆ, ತಗಾದೆ ತೆಯುತ್ತಲೇ ಇದ್ದಾರೆ. ಇಂತಹ ಬೆದರಿಕೆಗಳ್ನು ನಿಲ್ಲಿಸಬೇಕೆಂದು ತಿಳಿಸಿದ್ದಾರೆ. 

2007ರ ಡಿಸೆಂಬರ್ 17 ರಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸಿದ ಸರಕಾರದ ಆದೇಶದ ಅನ್ವಯ ಶಿರಾ ಮತ್ತು ಕಳ್ಳಂಬೆಳ್ಳ ಕೆರೆಗೆ ನಿಗಧಿಯಾಗಿದ್ದ. 90 ಟಿಎಂ.ಸಿ.ನೀರಿನಲ್ಲಿ ಉಳಿಕೆಯಾಗುವ 0.4 ಟಿ.ಎಂ.ಸಿ ನೀರನ್ನು ತೆರದ ನಾಲೆಯ ಮೂಲಕ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ. ಹೀಗಿದ್ದರೂ ಕಾನೂನು ಸಚಿವರಾಗಿರುವ ಜೆ.ಸಿ.ಮಾಧುಸ್ವಾಮಿ ನೀರು ನಿಗಧಿಯಾಗಿಲ್ಲ ಎಂದು ಸುಳ್ಳು ಹೇಳಿ ಜನರನ್ನು ತಪ್ಪುದಾರಿಗೆ ಎಳೆಯುತಿದ್ದಾರೆ.

ಕೃಷ್ಣಕೊಳ್ಳ ನೀರಾವರಿ ಹೋರಾಟ ಸಮಿತಿಯ ಹಲವು ಪ್ರಯತ್ನದ ಫಲವಾಗಿ 2008ರಲ್ಲಿ ಆರಂಭವಾದ ಯೋಜನೆ, ನೀರಿನ ಲಭ್ಯತೆ, ತಾಂತ್ರಿಕ ಕಾರ್ಯಸಾಧು, ಹೈಕೋರ್ಟಿಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ ಸೇರಿದಂತೆ ಹಲವಾರು ಅಡೆತಡೆಗಳನ್ನು ದಾಟಿ 2013ಕ್ಕೆ ಡಿಪಿಆರ್.ಆಗಿ ಹೊರಬಂದಿತ್ತು.

2017ರಕ್ಕೆ ಯೋಜನೆ ಪೂರ್ಣಗೊಂಡು ಪ್ರಾಯೋಗಿಕವಾಗಿ ನೀರನ್ನು ಹರಿಸಲಾಗಿತ್ತು. ಹೀಗಿದ್ದರೂ ಏಕಾಎಕಿ ನೀರು ನಿಗಧಿಯಾಗಿಲ್ಲ. ಬೇರೆ ಜಲಾನಯನ ಪ್ರದೇಶ ಹೀಗೆ ಕೊಂಕು ತೆಗೆಯುವ ಮೂಲಕ ಶಿರಾ ಮತ್ತು ಚಿಕ್ಕನಾಯಕನಹಳ್ಳಿ ಜನರ ಕುಡಿಯುವ ನೀರಿನ ಹಕ್ಕಿನ ಮೇಲೆ ಗಧಾಪ್ರಹಾರ ನಡೆಸಲು ಮುಂದಾಗಿದ್ದಾರೆ. ಇದು ಸರಿಯಲ್ಲ. ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದು ನಮಗೆ ನಾವೇ ವಂಚನೆ ಮಾಡಿಕೊಂಡಂತೆ ಎಂದು ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಇದೇ ವೇಳೆ ಪಾದಯಾತ್ರೆ ಕುರಿತು ಮಾತನಾಡಿದ ಅವರು, ಕೋವಿಡ್ ಸಂಬಂಧಿತ ನಿರ್ಬಂಧಗಳಿರುವುದರಿಂದ ಶಿರಾದಿಂದ ತುಮಕೂರಿನವರೆಗೂ ಆಯೋಜಿಸಲಾಗಿದ್ದ ಪಾದಯಾತ್ರೆಯನ್ನು ಮುಂದೂಡಲಾಗಿದೆ ಎಂದಿದ್ದಾರೆ. 

ಬ್ರಿಜೇಶ್ ಕಾಳಪ್ಪ ಮಾತನಾಡಿ, 2020ರ ಡಿಸೆಂಬರ್ 20 ರಂದು ಮದಲೂರು ಗ್ರಾಮದಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮುಂದಿನ ಆರು ತಿಂಗಳಲ್ಲಿ ಮದಲೂರು ಕೆರೆಗೆ ನೀರು ತುಂಬಿಸಿ, ಭಾಗಿನ ಆರ್ಪಿಸುವುದಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದಾಗ, ಮಾಧುಸ್ವಾಮಿ ಮೌನಕ್ಕೆ ಶರಣಾಗಿದ್ದು ಏಕೇ ಎಂದು ಪ್ರಶ್ನಿಸಿದ ಅವರು, ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದರಿಂದ ಮುಖಂಡರಿಗೆ ಯಾವುದೇ ನಷ್ಟವಿಲ್ಲ .ಆದರೆ ಜನರು ನೀರಿಲ್ಲದ ಪರದಾಡ ಬೇಕಾಗುತ್ತದೆ. ಇಷ್ಟು ಪರಿಜ್ಞಾನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬೇಡವೇ ಎಂದು ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com