ಎಂ.ಬಿ. ಪಾಟೀಲ್- ಯಡಿಯೂರಪ್ಪ ಭೇಟಿ: ರಾಜಕೀಯ ವಲಯದಲ್ಲಿ ಕುತೂಹಲ!

ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಎಂ.ಬಿ. ಪಾಟೀಲ್- ಯಡಿಯೂರಪ್ಪ ಭೇಟಿ: ರಾಜಕೀಯ ವಲಯದಲ್ಲಿ ಕುತೂಹಲ!
Updated on

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರು ಸಿಎಂ ಅಧಿಕೃತ ನಿವಾಸ ಕಾವೇರಿಗೆ ತೆರಳಿ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. 

ಸಿಎಂ ಭೇಟಿಯ ಬಳಿಕ ಮಾತನಾಡಿರುವ ಎಂ.ಬಿ. ಪಾಟೀಲ್, ಯಾವುದೇ ರಾಜಕೀಯ ಚರ್ಚೆಯನ್ನು ಮಾಡಿಲ್ಲ ಎಂದು ಸ್ಷಷ್ಟಪಡಿಸಿದ್ದಾರೆ. ಆದರೂ ಇಬ್ಬರು ನಾಯಕರ ಭೇಟಿ ಮಹತ್ವದ ಪಡೆದುಕೊಂಡಿದ್ದು, ಅದಕ್ಕೆ ಕಾರಣವೂ ಇದೆ.

ಸರ್ಕಾರಿ ಕೆಲಸಗಳಿದ್ದಾಗ ರಾಜಕೀಯ ನಾಯಕರು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡುವುದು ವಾಡಿಕೆ. ಆದರೆ ಎಂ.ಬಿ. ಪಾಟೀಲ್ ಹಾಗೂ ಯಡಿಯೂರಪ್ಪ ಅವರು ಕೃಷ್ಣಾದಲ್ಲಿ ಭೇಟಿ ಮಾಡಿಲ್ಲ, ಬದಲಿಗೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ್ದಾರೆ.

ನಾನು ಒಬ್ಬ ಶಾಸಕ, ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಗಳು. ಹೀಗಾಗಿ ‌ನಾನು‌ ಅವರನ್ನು ಭೇಟಿಯಾಗಿದ್ದೇನೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ನನ್ನ  ಕ್ಷೇತ್ರದ, ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಆದರೆ ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ" ಎಂದು ಸಿಎಂ ಭೇಟಿ ಮಾಡಿದ ಬಳಿಕ ಮಾಜಿ ಸಚಿವ ಎಂ.ಬಿ. ಪಾಟೀಲ್ ಮಾಧ್ಯಮಗಳಿಗೆ ಹೇಳಿದ್ದಾರೆ.

ಜೊತೆಗೆ "ಅಂತರ್ಜಲ ಮಟ್ಟ ಹೆಚ್ಚಿಸಲು ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾದನಲ್ಲಿ ಕೆರೆ ಕಟ್ಟಿಗಳಿಗೆ ನೀರು ತುಂಬಿಸುವ ಯೋಜನಾ ವರದಿ ತಯಾರಿಸಲಾಗಿತ್ತು.  ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನೆನಗುದಿಗೆ ಬಿದಿತ್ತು,
ಹೀಗಾಗಿ ಯೋಜನೆಯನ್ನು ಜಾರಿಗೆ ತರಲು ಮನವಿ ಮಾಡಿದ್ದೇನೆ" ಎಂದು ಮಾಜಿ ಜಲಸಂಪನ್ಮೂಲ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಆಲಮಟ್ಟಿ ಜಲಾಶಯದಿಂದ ಮಾನ್ಸೂನ್ ಸಮಯದಲ್ಲಿ ಹೆಚ್ಚುವರಿ ನೀರಿನಿಂದ ಕೆರೆ ತುಂಬಿಸುವುದು ಹಾಗೂ ಇಂಡಿ ತಾಲೂಕಿನ 16 ಕೆರೆಗಳಿಗೆ ನಿಡಗುಂದಿ ಉಪ ಕಾಲುವೆಯಿಂದ ನೀರು ತುಂಬಿಸುವ ಯೋಜನೆಗಳ ಕುರಿತು ಚರ್ಚೆ ಮಾಡಿದ್ದೇನೆ. ಇದಕ್ಕೆ ಸಹಮತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಅಗತ್ಯ ಆರ್ಥಿಕ ನೆರವು ಒದಗಿಸಲು ಕ್ರಮ ಜರುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಸರ್ಕಾರ ಪಕ್ಷ ಅಧಿಕಾರದಲ್ಲಿದ್ದಾಗ, ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರೂ ನಾಯಕರ ಮಧ್ಯೆ ಆರೋಪ-ಪ್ರತ್ಯಾರೋಗಳು ನಡೆದಿದ್ದವು. ಚುನಾವಣೆ ಬಳಿಕ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟವೂ ಕಾವು ಕಳೆದು ಕೊಂಡಿದೆ. ಇದೀಗ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿ ನಡೆಯುತ್ತಿದ್ದರೆ, ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಚರ್ಚೆ ಕಾವೇರಿದೆ. ಜೊತೆಗೆ ಯಡಿಯೂರಪ್ಪ ಬದಲಾವಣೆಗೆ ಆಗ್ರಹಿಸುತ್ತಿರುವ ಬಿಜೆಪಿ ಶಾಸಕ
ಬಸನಗೌಡ ಪಾಟೀಲ್ ಯತ್ನಾಳ್ ಅವರೂ ಕೂಡ ವಿಜಯಪುರ ಜಿಲ್ಲೆಯವರು. ಹೀಗಾಗಿ ಲಿಂಗಾಯತ ಸಮುದಾಯದ ಇಬ್ಬರು ಪ್ರಭಾವಿ ನಾಯಕರ ಭೇಟಿಗೆ ಮಹತ್ವದ ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com