2023 ಸಾರ್ವತ್ರಿಕ ಚುನಾವಣೆಗೆ ಸಕ್ರಿಯವಾಗಿ ಕೆಲಸ ಮಾಡಲು ದೇವೇಗೌಡ ನಿರ್ಧಾರ!
ಬೆಂಗಳೂರು: ಉಪಚುನಾವಣೆಯಲ್ಲಿ ಸೋಲು-ಗೆಲುವಿನ ಕುರಿತು ಚರ್ಚೆ ಮಾಡುವ ಬದಲು 2023ರ ಸಾರ್ವತ್ರಿಕ ಚುನಾವಣೆಗೆ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದ ನಿರ್ಧಾರ ಕೈಗೊಂಡಿದ್ದೇನೆಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ಗುರುವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಲಕ್ಷ್ಮೀ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ನಮಗೆ ಬಂದಿರುವ ಫಲಿತಾಂಶವನ್ನು ಸ್ವೀಕಾರ ಮಾಡುತ್ತೇವೆ. ಜನತೆಯ ತೀರ್ಮಾನಕ್ಕೆ ತಲೆ ಬಾಗುತ್ತೇವೆ. ಪ್ರಾದೇಶಿಕ ಪಕ್ಷವನ್ನು ಉಳಿಸಲು ಕೆಲಸ ಮಾಡುತ್ತೇವೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಸಕ್ರಿಯವಾಗಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಹಲವು ಯೋಜನೆ ರೂಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಜೊತೆಗೆ ಸಭೆ ನಡೆಸಿದ್ದೇನೆ. ಸುಮಾರು ಮೂರು ತಾಸುಗಳ ಕಾಲ ಪಕ್ಷದ ಸಂಘಟನೆ ಕುರಿತು ಸಮಾಲೋಚನೆ ನಡೆಸಲಾಗಿದೆ. ಯಾವುದೇ ಪಕ್ಷ ಕಟ್ಟಲು ಆರ್ಥಿಕ ಶಕ್ತಿ ಮುಖ್ಯವಾಗಿದೆ. ಕಾಂಗ್ರೆಸ್, ಬಿಜೆಪಿ ಹಣ ಎಷ್ಟಿದ ಎಂಬುದರ ಬಗ್ಗೆ ಹೇಳುವುದಿಲ್ಲ.
ನಮ್ಮದು ಪ್ರಾದೇಶಿಕ ಪಕ್ಷದ. ಅದನ್ನು ಉಳಿಸಬೇಕಾಗಿದೆ. ಆರ್ಥಿಕತೆಯ ಅಗತ್ಯ ಇದ್ದು, ಜವಾಬ್ದಾರಿಯನ್ನು ಎಲ್ಲರೂ ಹೊರಬೇಕು ಎಂದು ತಿಳಿಸಿದ್ದಾರೆ.
ಉಪಚುನಾವಣೆಯಲ್ಲಿ ಸ್ವೇಚ್ಛಾಚಾರವಾಗಿ ಹಣ ಖರ್ಚು ಮಾಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಠೇವಣಿ ಕಳೆದುಕೊಳ್ಳಲಾಗಿದೆ. ಇಲ್ಲಿ ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರೆ. ಅಧಇಕಾರ, ಹಣದ ದುರುಪಯೋಗವಾಗುತ್ತಿದೆ. ನಾನು ಯಾವುದೇ ಕೆಲಸ ಮಾಡಿದರೂ ದೇವಲ ನಂಬಿಯೇ ಎಂದು ಕಾಂಗ್ರೆಸ್, ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಸಿಂದಗಿಯಲ್ಲಿ 38 ಸಾವಿರ ಮುಸ್ಲಿಂ ಮತದಾರರು ಇದ್ದರು, ಮುಸ್ಲಿಂ ಮತದಾರರು ಬಿಜೆಪಿಗೆ ಮತ ಚಲಾಯಿಸಿದರಾ? ನಮ್ಮ ಅಭ್ಯರ್ಥಿ ಮುಸ್ಲಿಂ ಆಗಿದ್ದರೂ ನಮಗೆ ಮತ ಹಾಕಿಲ್ಲವಂದರೆ ಕಾಂಗ್ರೆಸ್'ಗೆ ಹೋಗಿರಬಹುದು ಎಂದು ಹೇಳಿದರು.
ಇದೇ 8 ರಿಂದ ಪಕ್ಷದ ಸಂಘಟನೆಗೆ ಚಾಲನೆ ನೀಡಲಾಗುತ್ತಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ