
ಬೆಂಗಳೂರು: ಅತ್ಯಂತ ಚಿಕ್ಕವಯಸ್ಸಿನಲ್ಲೇ ನಮ್ಮನ್ನು ಅಗಲಿದ ನಟ ಸಂಚಾರಿ ವಿಜಯ್ ನನಗೆ ಬಹಳ ಬೇಕಾಗಿದ್ದ ಹುಡುಗ. ಪರಿಶ್ರಮದಿಂದ ನಟನಾಗಿ ಹೆಸರು ಗಳಿಸಿದ್ದರು ಎಂದು ಸಚಿವ ಮಾಧುಸ್ವಾಮಿ ಶ್ಲಾಘಿಸಿದ್ದಾರೆ.
ವಿಧಾನಸಭೆಯಲ್ಲಿ ಸಂತಾಪ ಸೂಚಕ ನಿರ್ಣಯ ಬೆಂಬಲಿಸಿ ಅವರು ಮಾತನಾಡಿ, 'ನಾನು ಅವನಲ್ಲ ಅವಳು' ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಪಂಚನಹಳ್ಳಿಯ ಯುವಕ ವಿಜಯ್ ಅಗಲಿಕೆಗೆ ಸಂತಾಪ ಸಚಿಸುತ್ತಿದ್ದೇವೆ. ಆದರೆ, ಬದುಕಿದ್ದಾಗ, ನಾವೆಲ್ಲ ಅವರನ್ನು ಕಡೆಗಣಿಸಿದೆವೆನೋ? ಆತ ಬದುಕಿದ್ದರೆ ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಪ್ರಶಸ್ತಿ ಲಭಿಸುತ್ತಿತ್ತೇನೋ ಎಂದರು.
ತಮ್ಮ ಅಭಿನಯದ 'ನಾನು ಅವನಲ್ಲ ಅವಳು' ಚಿತ್ರದ ವಿಡಿಯೋವನ್ನು ಆತ ನನಗೆ ತೋರಿಸಿ ಅಭಿಪ್ರಾಯ ಕೇಳಿದಾಗ, ಪ್ರಶಸ್ತಿ ಸಿಗುವುದು ಖಂಡಿತ ಎಂದು ಮೊದಲೇ ಹೇಳಿದ್ದೆ ಎಂದರು.
ಪಂಚನಹಳ್ಳಿಗೂ, ನನ್ನ ಕ್ಷೇತ್ರಕ್ಕೆ ಕೇವಲ 2 ಕಿಮೀ ಅಂತರ. ತಿಪಟೂರಲ್ಲಿ ವ್ಯಾಸಂಗ ಮಾಡಿ ಉಪನ್ಯಾಸಕ ವೃತ್ತಿ ಮಾಡುತ್ತಿದ್ದರೂ ಅದನ್ನು ಬಿಟ್ಟು ಅಭಿನಯ ಕ್ಷೇತ್ರದತ್ತ ವಾಲಿದ್ದರು. ವಿಜಯ್ ಗೆ ರಾಷ್ಟ್ರಪ್ರಶಸ್ತಿ ಸಿಕ್ಕಾಗ ಅವರಿಗೆ ಅಮೀರ್ ಖಾನ್ ತೀವ್ರ ಸ್ಪರ್ಧೆಯೊಡ್ಡಿದ್ದರು ಎಂದು ನೆನಪಿಸಿಕೊಂಡರು.
'ನಾನು ಅವನಲ್ಲ ಅವಳು' ಚಿತ್ರ ನೋಡಿಲ್ಲ. ನೀವ್ ನೋಡಿದ್ದೀರಾ?: ಸಿದ್ದರಾಮಯ್ಯ
ನಟ ಸಂಚಾರಿ ವಿಜಯ್ ಅದ್ಭುತ ಕಲಾವಿದ. ರಂಗಭೂಮಿಯ ಮೂಲಕ ಕಿರುತೆರೆ, ಬೆಳ್ಳಿತೆರೆಯಲ್ಲಿ ಮಿಂಚಿದವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭೆಯಲ್ಲಿಂದು ಸಭಾಧ್ಯಕ್ಷರು ಮಂಡಿಸಿದ ಸಂತಾಪ ಸೂಚಕ ನಿರ್ಣಯ ಬೆಂಬಲಿಸಿ ಅವರು ಮಾತನಾಡಿ, ಮಂಗಳಮುಖಿಯರಂತೆ ನಟ ವಿಜಯ್ ಅಭಿನಯಿಸಿರುವ 'ನಾನು ಅವನಲ್ಲ ಅವಳು' ಚಿತ್ರ ಬಹಳ ಚೆನ್ನಾಗಿದೆ. ಮನೋಜ್ಞವಾಗಿ ನಟಿಸಿದ್ದಾರೆ. ಆದರೆ ನಾನು ಆ ಚಿತ್ರ ನೋಡಿಲ್ಲ. ನೀವು ನೋಡಿದ್ದೀರಾ? ಎಂದು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದರು.
ಮಂಗಳಮುಖಿಯರಂತೆ ನಟಿಸುವುದು ಸುಲಭದ ಮಾತಲ್ಲ. ಅವರ ನಡೆ, ನುಡಿಯ ಬಗ್ಗೆ ಅಧ್ಯಯನ ಮಾಡಿದವರಿಗಷ್ಟೇ ಸಾಧ್ಯ. ಹೀಗಾಗಿ'ನಾನು ಅವನಲ್ಲ ಅವಳು' ಚಿತ್ರದ ಅವರ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿಯೂ ದೊರಕಿತು ಎಂದರು.
ಅವರ ಅಭಿನಯದ 'ಹರಿವು' ಚಿತ್ರಕ್ಕೂ ಸಹ ಪ್ರಶಸ್ತಿ ದೊರಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೊರೋನಾ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದವರಿಗೆ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಕನ್ನಡ ಚಲನಚಿತ್ರ ರಂಗದಲ್ಲಿ ಅವರಿನ್ನೂ ಇರಬೇಕಿತ್ತು. ಆದರೆ ಅಪಘಾತದಿಂದಾಗಿ ಅಕಾಲ ಮರಣಕ್ಕೀಡಾದರು. ಪ್ರತಿಭಾವಂತ ನಟನ ನಿಧನದಿಂದ ಚಲನಚಿತ್ರರಂಗ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.
Advertisement